ಜೈಪುರ: 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್ ಪುರ ಸೆಷನ್ ಕೋರ್ಟ್ ಬಾಲಿವುಡ್ 'ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಗೆ ಖಡಕ್ ಎಚ್ಚರಿಕೆ ನೀಡಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಜಾಮೀನು ರದ್ದು ಮಾಡುವುದಾಗಿ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸಲ್ಮಾನ್ ಖಾನ್ ನಿರಂತರವಾಗಿ ವಿಚಾರಣೆಗೆ ಗೈರಾಗುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ನ್ಯಾಯಾಲಯ ಸಲ್ಮಾನ್ ಖಾನ್ ಗೆ ಖಡಕ್ ಎಚ್ಚರಿಕೆ ನೀಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಜೋಧ್ ಪುರ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಕುಮಾರ್ ಸೊಂಗಾರ ಅವರು, ಮುಂದಿನ ವಿಚಾರಣೆಗೆ ಸಲ್ಮಾನ್ ಖಾನ್ ಖುದ್ಧು ಹಾಜರಾಗಬೇಕು. ಇಲ್ಲವಾದಲ್ಲಿ ಅವರಿಗೆ ನೀಡಿರುವ ಜಾಮೀನು ಅನ್ನು ನಿರಾಕರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಾಸಿಕ್ಯೂಷನ್ ಪರ ಪರ ವಕೀಲ ಮಹಿಪಾಲ್ ಬಿಷ್ಣೋಯ್ ಅವರು, ಈ ಹಿಂದೆ ಸಲ್ಮಾನ್ ಖಾನ್ ಗೆ ಖುದ್ಧು ಹಾಜರಾತಿಯಿಂದ ಕೋರ್ಟ್ ತಾತ್ಕಾಲಿಕ ವಿನಾಯಿತಿ ನೀಡಿತ್ತು. ಆದರೆ ಅದನ್ನೇ ಮುಂದುವರೆಸಿದ ಸಲ್ಮಾನ್ ಪರ ವಕೀಲರು ಪದೇ ಪದೇ ವಿನಾಯಿತಿ ಕೇಳಿದ್ದು, ಇದಕ್ಕೆ ನಾವು ತಕರಾರು ಸಲ್ಲಿಸಿದ್ದೆವು. ಇದೀಗ ನಮ್ಮ ಮನವಿಗೆ ಸ್ಪಂದಿಸಿರುವ ಕೋರ್ಟ್ ಖುದ್ಧು ಹಾಜರಾಗುವಂತೆ ಸಲ್ಮಾನ್ ಖಾನ್ ಗೆ ಸೂಚನೆ ನೀಡಿದೆ.
ಏಪ್ರಿಲ್ 5 ರಂದು ಖಾನ್ ಅವರ 1998 ರ ಚಲನಚಿತ್ರ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ಸಮಯದಲ್ಲಿ ಜೋಧಪುರದಲ್ಲಿ ಕೃಷ್ಣಮೃಗಗಳನ್ನು ಕೊಂದ ಆರೋಪದಲ್ಲಿ ಕಳೆದ ವರ್ಷ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.ಆದರೆ ಸಲ್ಮಾನ್ ಖಾನ್ ಅವರು ಜೋಧ್ಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ನಂತರ ನ್ಯಾಯಾಲಯ ಅವರಿಗೆ ಜಾಮೀನು ನೀಡಿತು. ಇನ್ನೊಂದೆಡೆಗೆ ಅವರ ಸಹ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೆಂದ್ರೆ, ನೀಲಂ ಕೊಥಾರಿ ಮತ್ತು ಟಬು - ಮತ್ತೊಬ್ಬ ಆರೋಪಿ ದುಶ್ಯಂತ್ ಸಿಂಗ್ ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.