ಲೀಡ್ಸ್: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರ ಭರ್ಜರಿ ಶತಕಗಳ ನೆರವಿನಿಂದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಂದು ಐಸಿಸಿ ಏಕದಿನ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿ, ಟೀಂ ಇಂಡಿಯಾಗೆ ಗೆಲ್ಲಲು 265 ರನ್ ಗುರಿ ನೀಡಿತ್ತು.
ಬಳಿಕ ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮಾ(103) ಹಾಗೂ ಕೆಎಲ್ ರಾಹುಲ್ ಶತಕ(111)ದಾಟದ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ ಭರ್ಜರಿ ಗೆಲುವು ದಾಖಲಿಸಿತು.
ಕೆಎಲ್ ರಾಹುಲ್ ಅವರು ವಿಶ್ವಕಪ್ ನಲ್ಲಿ ಮೊದಲ ಶತಕ ದಾಖಲಿಸಿ ಔಟ್ ಆದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ(34) ಹಾಗೂ ಹಾರ್ದಿಕ್ ಪಾಂಡ್ಯ(7) ಗೆಲುವಿನ ದಡ ಸೇರಿಸಿದರು.
ಶ್ರೀಲಂಕಾ ಪರ ಲಸಿತ್ ಮಾಲಿಂಗ, ಇಸುರು ಉಡಾನ ಹಾಗೂ ಕಸುವ ರಜಿತ ಅವರು ತಲಾ 1 ವಿಕೆಟ್ ಪಡೆದರು.
ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದರೂ ಅಂಕಪಟ್ಟಿಯಲ್ಲಿ ಅಗ್ರಪಟ್ಟ ಗುರಿಯಾಗಿರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದೆ. ಇದೀಗ ಮಗದೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಿದರೆ ಭಾರತ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಸೆಮಿಫೈನಲ್ನಲ್ಲಿ ಭಾರತ ಯಾವ ತಂಡ ಎದುರಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.