ಮುಂಬೈ: ನನ್ನನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಲಾಗಿತ್ತು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಇಂದು ಕೋರ್ಟ್ ಗೆ ಹಾಜರಾಗಿದ್ದ ಅಣ್ಣಾ ಹಜಾರೆ, ಒಸ್ಮಾನಾಬಾದ್ನ ತೆರ್ನಾ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಕಾರಣಕ್ಕೆ ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು. ಪ್ರಕರಣದ ಆರೋಪಿ ಪಾಟೀಲ್ ನನಗೆ ಬೆದರಿಕೆ ಹಾಕಿದರು ಮತ್ತು ಈ ವಿಷಯದಲ್ಲಿ ನನ್ನ ದೂರುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಒಮ್ಮೆ ಅವರ ಜನರು ನನ್ನ ಕಚೇರಿಗೆ ಬಂದು ಖಾಲಿ ಚೆಕ್ ನೀಡಿದರು ಎಂದು ಹೇಳಿಕೆ ನೀಡಿದ್ದಾರೆ.
2006ರ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಪವನ್ ರಾಜೇ ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಅಣ್ಣಾ ಹಜಾರೆ ಅವರು ನ್ಯಾಯಮೂರ್ತಿಗಳಾದ ಆನಂದ್ ಯಾವಲ್ಕರ್ ನೇತೃತ್ವದ ಸಿಬಿಐ ವಿಶೇಷ ಕೋರ್ಟ್ ಎದುರು ಹಾಜರಾಗಿ ಈ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ ಮತ್ತು ಎನ್ ಸಿಪಿ ನಾಯಕ ಪದಮ್ ಸಿಂಹ ಪಾಟೀಲ್, 2006 ರಲ್ಲಿ ಅವರ ಸೋದರ ಸಂಬಂಧಿ ಪವನ್ ರಾಜೇ ನಿಂಬಲ್ಕರ್ ಅವರ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾರೆ. ಉಸ್ಮಾನಾಬಾದ್ ಮೂಲದ ಸಕ್ಕರೆ ಕಾರ್ಖಾನೆಯೊಂದಿಗೆ ಸಂಬಂಧ ಹೊಂದಿದ್ದು, ಪ್ರಸ್ತುತ ಟೆರ್ನಾ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ.