ದೇಶ

ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಳಿಕ ಎಂ ಎಸ್ ಧೋನಿ ಬಿಜೆಪಿ ಸೇರಬಹುದು: ಮಾಜಿ ಸಚಿವ ಸಂಜಯ್ ಪಾಸ್ವಾನ್

Sumana Upadhyaya
ನವದೆಹಲಿ: ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಬಳಿಕ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಭಾರತೀಯ ಜನತಾ ಪಕ್ಷವನ್ನು ಸೇರಿ ರಾಜಕೀಯದಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಐಎಎನ್ಎಸ್ ಜೊತೆ ಮಾತನಾಡಿದ ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಸಂಜಯ್ ಪಾಸ್ವಾನ್ ಧೋನಿಯವರು ಬಿಜೆಪಿ ಸೇರುವ ಬಗ್ಗೆ ಹಲವು ಸಮಯಗಳಿಂದ ಮಾತುಕತೆ ನಡೆಯುತ್ತಿದೆ. ಅವರು ಕ್ರಿಕೆಟ್ ನಿಂದ  ನಿವೃತ್ತಿ ಹೊಂದಿದ ಬಳಿಕವಷ್ಟೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.
ಧೋನಿ ನನ್ನ ಸ್ನೇಹಿತ, ವಿಶ್ವಮಟ್ಟದ ಆಟಗಾರ, ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಕರೆತರುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದರು.
ಕಳೆದ ಬಾರಿ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯ ಸಂಪರ್ಕ ಸಮರ್ಥನ ಅಭಿಯಾನದ ವೇಳೆ ಗೃಹ ಸಚಿವ ಅಮಿತ್ ಶಾ ಧೋನಿಯನ್ನು ಭೇಟಿ ಮಾಡಿದ್ದರು. 
ಈ ವರ್ಷದ ಅಂತ್ಯದಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ವೇಳೆ ಧೋನಿಯನ್ನು ಜಾರ್ಖಂಡ್ ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕೂಡ ಬಿಜೆಪಿ ಸೂಚಿಸಬಹುದು ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.
SCROLL FOR NEXT