ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ಮಾಡಿರುವ ಎರಡು ಫೋಟೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ.
30 ವರ್ಷ ಹಳೆಯ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವ ಗುಜರಾತ್ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಕುಟುಂಬ ಸದಸ್ಯರು ಶಶಿ ತರೂರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇವರ ಭೇಟಿಯ ಫೋಟೋವನ್ನು ಶಶಿ ತರೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, ನಾನು ನಿನ್ನೆ ಸಂಜೀವ್ ಭಟ್ ಪತ್ನಿ ಶ್ವೇತಾ ಭಟ್ಹಾಗೂ ಅವರ ಪುತ್ರ ಶಾಂತನೂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ನ್ಯಾಯ ಸಿಗಲೇ ಬೇಕು ಎಂದು ಟ್ವಿಟ್ಟರ್ ನಲ್ಲಿ ಹಾಕಿದ್ದರು.
ಶಶಿ ತರೂರ್ ಹಾಕಿರುವ ಫೋಟೋ ಪೋಸ್ಟ್ ಮಾಡಿದ ತಕ್ಷಣವೇ ನೆಟ್ಟಿಗರು, ಶಶಿ ತರೂರ್ ವಿರುದ್ಧ ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಶಿ ತರೂರ್ ಅವರ ಕಚೇರಿಯಲ್ಲಿ ಟೇಬಲ್ ಮೇಲೆ ಇರಿಸಿರುವ ರಾಷ್ಟ್ರಧ್ವಜ ತಲೆಕೆಳಗಾಗಿದೆ. ಮೇಲ್ಭಾಗದಲ್ಲಿ ಹಸಿರು ಬಣ್ಣ ಬರುವಂತೆ ರಾಷ್ಟ್ರ ಧ್ವಜ ಇರಿಸಲಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಮೊದಲು ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದು ಕಿಡಿ ಕಾರಿದ್ದಾರೆ.