ನವದೆಹಲಿ: ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಉಗ್ರ ಮಸೂದ್ ಅಜರ್ ಜೀ ಎಂದು ಬಾಯ್ತಪ್ಪಿನಿಂದ ಹೇಳಿದ್ದು ವಿವಾದಕ್ಕೆ ಗ್ರಾಸವಾಗಿತ್ತು. ಈಗ ಅಂಥಹದ್ದೇ ವಿವಾದಕ್ಕೆ ಬಿಜೆಪಿ ಸಂಸದ ಗುರಿಯಾಗಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ)ದ ಮೇಲಿನ ಚರ್ಚೆಯಲ್ಲಿ ಮಾತನಾಡಿರುವ ಬಿಜೆಪಿ ಸಂಸದ ವಿಷ್ಣು ದಯಾಳ್ ರಾಮ್ ಭಯೋತ್ಪಾದಕರ ಪಟ್ಟಿಯನ್ನು ಹೇಳುವಾಗ ಬಾಯ್ತಪ್ಪಿನಿಂದ ಮಸೂದ್ ಅಜರ್ ನ್ನು ಮಸೂದ್ ಅಜರ್ ಜೀ ಎಂದು ಹೇಳಿದ್ದಾರೆ. "ಭಯೋತ್ಪಾದಕರ ಪಟ್ಟಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ ಶಫಿ ಅರ್ಮಾನ್,ಕರ್ನಾಟಕದ ಭಟ್ಕಳದ ಉಗ್ರ, ಮಸೂದ್ ಅಜರ್ ಜೀ...ಅವರನ್ನೂ ಸೇರಿಸಬೇಕು ಎಂದು ವಿಷ್ಣು ದಯಾಳ್ ರಾಮ್ ಯಡವಟ್ಟು ಮಾಡಿಕೊಂಡಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡು ತಮ್ಮ ತಪ್ಪನ್ನು ತಿದ್ದುಕೊಂಡಿರುವ ವಿಷ್ಣು ದಯಾಳ್ ರಾಮ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಸೂದ್ ಅಜರ್ ಎಂದು ಹೇಳಿದ್ದಾರೆ.
ಉಗ್ರರ ಪಟ್ಟಿಯನ್ನು ಹೇಳಿರುವ ಬಿಜೆಪಿ ಸಂಸದ, ಉಗ್ರರ ಪಟ್ಟಿಗೆ ಸೇರಿಸದೇ ಇವರನ್ನೆಲ್ಲಾ ಮತ್ತೇನೆಂದು ಘೋಷಿಸಬೇಕೆಂದು ಪ್ರಶ್ನೆ ಮಾಡಿದ್ದಾರೆ.