ನವದೆಹಲಿ: ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವೇನೂ ಇಲ್ಲ, ಅದು ಭಾರತದಿಂದಲೇ ಆಗಿದ್ದು ಎಂದು ಹೇಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ನಮಗೆ ಸತ್ಯ ಏನು ಎಂದು ಗೊತ್ತಿದೆ.
ಹೀಗಾಗಿ ಯಾರು ಏನು ಹೇಳಿದರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ, ನಮಗೆ, ನಮ್ಮ ದೇಶದ ಸರ್ಕಾರಕ್ಕೆ ಮತ್ತು ನಮ್ಮ ದೇಶದ ಗುಪ್ತಚರ ಸಂಸ್ಥೆಗಳಿಗೆ ಸತ್ಯ ಏನು ಎಂಬುದು ಗೊತ್ತಿದೆ ಎಂದರು.
ಪುಲ್ವಾಮಾ ಭಯೋತ್ಪಾದಕ ದಾಳಿ ಬಗ್ಗೆ ನಮ್ಮ ಗುಪ್ತಚರ ಸಂಸ್ಥೆಗಳು ಸಾಕಷ್ಟು ಪುರಾವೆಗಳನ್ನು ನೀಡಿವೆ ಎಂದು ಮಾತ್ರ ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ ಎಂದರು.
ಭಾರತೀಯ ಭದ್ರತಾ ಪಡೆಗಳ ಕ್ರೂರ ಹಿಂಸಾಕೃತ್ಯಗಳಿಂದ ಬೇಸತ್ತು ಹೋಗಿ ಕಾಶ್ಮೀರದ ಹುಡುಗನೊಬ್ಬ ಪುಲ್ವಾಮಾ ದಾಳಿ ನಡೆಸಿದ್ದಾನೆ, ಆದರೆ ಈ ವಿಷಯದಲ್ಲಿ ಪಾಕಿಸ್ತಾನದ ಹೆಸರನ್ನು ಎಳೆದು ತರಲಾಯಿತು ಎಂದು ಇತ್ತೀಚೆಗೆ ಅಮೆರಿಕಾಕ್ಕೆ ಭೇಟಿ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.
ಜೈಶ್ ಮೊಹಮ್ಮದ್ ಸಂಘಟನೆ ಪಾಕಿಸ್ತಾನದಲ್ಲಿ ತನ್ನ ನೆಲೆ ಹೊಂದಿದ್ದರೂ ಕೂಡ ಅದು ಕಾಶ್ಮೀರದಲ್ಲಿ ಕೂಡ ಶಿಬಿರ ತಾಣ ಹೊಂದಿದೆ, ಹಾಗಾಗಿ ಅದು ಭಾರತದ ಕಾಶ್ಮೀರ ಭಾಗದಿಂದಲೇ ದಾಳಿ ಆಗಿದೆ ಎಂಬುದು ಇಮ್ರಾನ್ ಖಾನ್ ವಾದವಾಗಿದೆ.