ಲಖನೌ: 18 ವರ್ಷದ ಮುಸ್ಲಿಂ ಯುವಕನೋರ್ವನಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಸೈಯಾದ್ರಾಜಾ ಪ್ರದೇಶದಲ್ಲಿ ನಿನ್ನೆ ನಡೆದಿದೆ.
ಸುಟ್ಟ ಗಾಯಗೊಳಿಂದಾಗಿ ಸಾವು ಬದುಕಿನ ನಡುವಿನ ಹೋರಾಟ ಮಾಡುತ್ತಿದ್ದ ಆ ಯುವಕ ಇಂದು ವಾರಾಣಸಿ ವಿಭಾಗೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಅಬ್ದುಲ್ ಖಲಿಖ್ ಮೃತಪಟ್ಟ ಯುವಕ.
ಭಾನುವಾರ ಬೆಳಗ್ಗೆ ನಿತ್ಯ ಕರ್ಮ ಮುಗಿಸಲು ಹೋಗುತ್ತಿದ್ದಾಗ ದುದಾರಿ ಸೇತುವೆ ಬಳಿ ಸ್ಕೂಟರ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಖಲಿಜ್ ನನ್ನು ದಾರಿ ತಪ್ಪಿಸಿದ್ದು, ಬೇರೆ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಆತನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವುದಾಗಿ ಆ ಯುವಕ ಹೇಳಿಕೆಯಲ್ಲಿ ದಾಖಲಿಸಿದ್ದಾನೆ.
ಮುಂಜಾನೆ 5 ರ ಸುಮಾರಿಗೆ ಖಲಿಜ್ ತೀವ್ರ ಸುಟ್ಟಗಾಯಗಳೊಂದಿಗೆ ಮನೆಗೆ ಬಂದಿದ್ದಾನೆ ಎಂದು ಸಂತ್ರಸ್ತನ ತಂದೆ ಜುಲ್ಫಿಕರ್ ಹೇಳಿದ್ದಾರೆ. ಆದರೆ, ಬಾಲಕನ ಹೇಳಿಕೆಗಳಲ್ಲಿ ಮತ್ತು ಪ್ರತ್ಯಕ್ಷದರ್ಶಿ ಪತ್ರಿಕೆ ವ್ಯಾಪಾರಿ ದಿನೇಶ್ ಮೌರ್ಯ ಅವರ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.
ಘಟನೆ ನಡೆದಾಗ ಯಾರೂ ಕೂಡಾ ಇರಲಿಲ್ಲ, ಸಂತ್ರಸ್ತ ಒಬ್ಬನೇ ಇದ್ದನೆಂದು ಪ್ರತ್ಯಕ್ಷದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಮಧ್ಯಾಹ್ನದ ನಂತರ ಕೆಲ ಸಮಾಜ ವಿರೋಧಿಗಳು ಸಂತ್ರಸ್ತ ಹಾಗೂ ಆತನ ತಾಯಿಯನ್ನು ಮನವೊಲಿಸಿ ಶ್ರೀರಾಮ್ ಘೋಷಣೆ ಬಗ್ಗೆ ಅಪಪ್ರಚಾರ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಂತ್ತಸ್ತ ಯುವಕ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ದಿನೇಶ್ ಮೌರ್ಯ ಎಲ್ಲವನ್ನೂ ನೋಡಿದ್ದಾರೆ. ಕೋಮು ಸೌಹಾರ್ದತೆ ಹದಗೆಡಿಸುವ ನಿಟ್ಟಿನಲ್ಲಿ ಕೆಲ ಸಮಾಜ ವಿರೋಧಿಗಳ ಮಾಡಿರುವ ಕುತಂತ್ರವಾಗಿದೆ ಎಂದಿದ್ದಾರೆ.
ಸಂತ್ರಸ್ತನ ಕುಟುಂಬದವರು ಕೆಲ ಯಾದವರ ಹೆಸರನ್ನು ಹೇಳಿದ್ದು, ಅದನ್ನು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ. ಆದರೆ, ಸಂತ್ರಸ್ತ ಆರೋಪಿ ಸುನೀಲ್ ಎಂದು ಕರೆದಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ.ಸಮಾಜದಲ್ಲಿನ ಸೌಹಾರ್ದತೆ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸಂತೋಷ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.