ನವದೆಹಲಿ: ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಇಂದು ಇಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಾಹುಲ್ ಗಾಂಧಿ ಮನವೊಲಿಕೆ ಕಸರತ್ತು ಬಿರುಸಿನಿಂದ ಸಾಗಿರುವಂತೆಯೇ ಅತ್ತ ಕಾಂಗ್ರೆಸ್ ಸಂಸದೀಯ ನಾಯಕರ ಆಯ್ಕೆ ಕಸರತ್ತು ಇಂದು ನಡೆಯಲಿದೆ.
ಮೂಲಗಳ ಪ್ರಕಾರ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದೀಯ ನಾಯಕರಾಗಿ ಆಯ್ಕೆಯಾಗುವುದಕ್ಕೆ ಹಿಂದೇಟು ಹಾಕಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷಗಾದಿಯಿಂದ ಕೆಳಗಿಳಿದಿರುವ ರಾಹುಲ್ ಗಾಂಧಿ ಕೊನೆಯ ಪಕ್ಷ ಸಂಸದೀಯ ನಾಯಕರಾಗಿ ಸಂಸತ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಎಂಬುದು ಕೈ ಸಂಸದರ ಅಭಿಲಾಷೆಯಾಗಿದೆ.
ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರ ಮನವೊಲಿಸುವ ಕಾರ್ಯ ಸಾಗಿದೆ. ಇನ್ನು ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಪ್ರದರ್ಶನ ತೋರಿತ್ತು. 2014ರಲ್ಲಿ ಆದ ಪರಿಸ್ಥಿತಿಯೇ ಈ ಬಾರಿಯೂ ಕಾಂಗ್ರೆಸ್ ಗೆ ದಕ್ಕಿದ್ದು, ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 52 ಕ್ಷೇತ್ರಗಳನ್ನು ಮಾತ್ರ ಗೆದ್ದಿದೆ. ಹೀಗಾಗಿ ಸಂಸತ್ ನಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖ ವಿಪಕ್ಷ ನಾಯಕ ಸ್ಥಾನಮಾನ ಪಡೆಯಲು ಇನ್ನೂ ಐದು ಸ್ಥಾನಗಳ ಅವಶ್ಯಕತೆ ಇದೆ.