ನವದೆಹಲಿ: ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆ ಬೋಧನೆ ಮಾಡಬೇಕೆಂಬ ಕರಡು ಶಿಕ್ಷಣ ನೀತಿ ಯೋಜನೆಗೆ ತಮಿಳು ನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಮಂತ್ರಿ ಎಸ್ ಜೈಶಂಕರ್, ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಆಯಾ ರಾಜ್ಯ ಸರ್ಕಾರಗಳ ಸಲಹೆ ಪಡೆಯಲಾಗುವುದು ಎಂದಿದ್ದಾರೆ.
ಈ ವಿಷಯ ಕುರಿತು ಟ್ವಿಟ್ಟರ್ ನಲ್ಲಿ ಅವರ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ವರದಿ ಕೇವಲ ಕರಡು ಪ್ರತಿ. ಸಾರ್ವಜನಿಕರಿಂದ ಈ ಕುರಿತು ಪ್ರತಿಕ್ರಿಯೆ ಕೋರಲಾಗುವುದು. ರಾಜ್ಯ ಸರ್ಕಾರಗಳ ಜೊತೆ ಸಹ ಸಮಾಲೋಚಿಸಲಾಗುವುದು. ನಂತರವಷ್ಟೇ ಕರಡು ವರದಿಯನ್ನು ಅಂತಿಮಗೊಳಿಸಲಾಗುವುದು. ಭಾರತ ಸರ್ಕಾರ ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ. ಯಾವುದೇ ಭಾಷೆಯನ್ನು ಜನರ ಮೇಲೆ ಹೇರುವುದಿಲ್ಲ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿರುವ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವು ಸುಧಾರಣಾ ಕ್ರಮಗಳಿಗೆ ಶಿಫಾರಸು ಮಾಡಲಾಗಿದ್ದು ಅದರ ಜೊತೆಗೆ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆ ಬೋಧನೆಗೆ ಕೂಡ ಆದ್ಯತೆ ನೀಡಲಾಗಿದೆ.
ಇದಕ್ಕೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಮ್ ಪಕ್ಷ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos