ದೇಶ

ಚೀಟಿ ಅವ್ಯವಹಾರದಿಂದ ಮಗ, ತಾಯಿ ಸಾವು ಪ್ರಕರಣ: ಐವರ ಬಂಧನ

Srinivas Rao BV
ಬೆಂಗಳೂರು: ಚೀಟಿ ವ್ಯವಹಾರದಿಂದ ನಷ್ಟ ಅನುಭವಿಸಿದ ಪರಿಣಾಮ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿ, ತಾಯಿ, ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಎಫ್ಐಆರ್ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ವಿಭೂತಪುರದಲ್ಲಿ ಸುರೇಶ್ ಬಾಬು ಮತ್ತು ಗೀತಾ ಬಾಯಿ ತಮ್ಮ ಮಕ್ಕಳೊಂದಿಗೆ ವಾಸವಿದ್ದರು. ಈ ಹಿಂದೆ ಇವರು ಚೀಟಿ ವ್ಯವಹಾರ ಮಾಡಿದ್ದರು. ಆದರೆ ಕೆಲವರಿಗೆ ಹಣ ಕೊಡಲು ಬಾಕಿ ಇತ್ತು. ಆದರೆ ಹಣ ಬರಬೇಕಾದವರು ಆಗಾಗ ಬಂದು ಬೆದರಿಸಿ ಹೋಗುತ್ತಿದ್ದರು. ಇದರಿಂದ ನೊಂದು ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ. ಅದರಲ್ಲಿ ಮಗ ಮತ್ತು ತಾಯಿ ಸಾವನ್ನಪ್ಪಿದ್ದರೆ, ತಂದೆ ಮತ್ತು ಮಗಳು ಬದುಕುಳಿದಿದ್ದಾರೆ ಎಂದು ಅವರು ತಿಳಿಸಿದರು.
ಅದರಂತೆ ಸುರೇಶ್ ಬಾಬು ತನ್ನ ಹನ್ನೆರಡು ವರ್ಷದ ಮಗನನ್ನು ನೇಣು ಹಾಕಿ ಕೊಂದಿದ್ದಾನೆ. ಆತನ ಪತ್ನಿ ಗೀತಾಬಾಯಿ (34) ಎಂಬುವರ ಆತ್ಮಹತ್ಯೆಗೂ ಕಾರಣನಾಗಿದ್ದಾನೆ. ಆದ್ದರಿಂದ ಆತನ ವಿರುದ್ಧ ಮಗನನ್ನು ಕೊಂದ ಆರೋಪದ ಮೇಲೆ 302 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಶನಿವಾರ ತಡರಾತ್ರಿ ಮಗನನ್ನು ಫ್ಯಾನ್‍ಗೆ ನೇಣು ಹಾಕಿ ಕೊಂದಿದ್ದ ಸುರೇಶ್, ಪತ್ನಿಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿದ್ದ. ಅದರಂತೆ ಗೀತಾಬಾಯಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರಿಬ್ಬರ ಸಾವು ಕಂಡು ಗಾಬರಿಗೊಂಡ ಮಗಳು, ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲವೆಂದು ಕೂಗಾಡಿದ್ದಳು. ಆಗ ಸುರೇಶ್, ಆತ್ಮಹತ್ಯೆ ಮಾಡಿಕೊಳ್ಳದೆ ಮಗಳನ್ನು ಕರೆದುಕೊಂಡು ಹೊರಗೆ ಬಂದು ಕೊಠಡಿ ಬಾಗಿಲು ಹಾಕಿದ್ದಾನೆ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ ಎಂದು ಅವರು ತಿಳಿಸಿದರು.
ಹಣಕ್ಕಾಗಿ ಬೆದರಿಕೆ ಹಾಕಿ ಇವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸ್ಥಳೀಯರಾದ ಡೈಸಿ ಮತ್ತು ಮಂಜು ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸುರೇಶ್ ಬಾಬು ತನ್ನ ಮಗನನ್ನು ನೇಣಿಗೆ ಹಾಕುತ್ತಿರುವ ದೃಶ್ಯವನ್ನು ಮಗಳು ವೀಡಿಯೋ ಮಾಡಿದ್ದಳು. ಅವಳು ಮಾಡಿದ ವೀಡಿಯೋವನ್ನು ಖಾಸಗಿ ವಾಹಿನಿಯ ಪತ್ರಕರ್ತನೊಬ್ಬ ಅವರಿಂದ ಪಡೆದು ವೈರಲ್ ಮಾಡಿದ್ದಾನೆ. ಆತನ ವಿರುದ್ಧವೂ ಎಫ್ಐಆರ್ ದಾಖಲಿಸಿದ್ದೇವೆ ಎಂದು ಅಹದ್ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
SCROLL FOR NEXT