ನವದೆಹಲಿ: ನಿರುದ್ಯೋಗ ಸಮಸ್ಯೆಗೆ ಪರಿಹಾರ ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡು ಸಂಪುಟ ಸಮಿತಿಗಳನ್ನು ಬುಧವಾರ ರಚಿಸಲಾಗಿದೆ.
ಹೂಡಿಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರೇಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೊಳಗೊಂಡ ಐವರು ಸಚಿವರ ಸಂಪುಟ ಸಮಿತಿ ರಚಿಸಲಾಗಿದೆ.
ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಕುರಿತ 10 ಸಚಿವರ ಮತ್ತೊಂದು ಸಂಪುಟ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್, ರಮೇಶ್ ಪೊಕ್ರಿಯಾಲ್, ಧರ್ಮೇಂದ್ರ ಪ್ರಧಾನ್, ಮಹೇಂದ್ರನಾಥ್ ಪಾಂಡೆ, ರಾಜ್ಯ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್, ಹರ್ದೀಪ್ ಸಿಂಗ್ ಪುರಿ ಸ್ಥಾನ ಪಡೆದಿದ್ದಾರೆ.
ಭರ್ಜರಿ ಬಹುಮತದೊಂದಿಗೆ ಎರಡನೇ ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ಜಿಡಿಪಿ ಕುಸಿತ ಹಾಗೂ ನಿರುದ್ಯೋಗ ದೊಡ್ಡ ಸವಾಲಾಗಿದ್ದು, ಇದೀಗ ಆ ಎರಡು ಪ್ರಮುಖ ಸಮಸ್ಯೆಗಳತ್ತ ಪ್ರಧಾನಿ ಗಮನ ಹರಿಸಿದ್ದಾರೆ.
ಕ್ಷಿಪ್ರಗತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ತ್ವರಿತ ಆರ್ಥಿಕ ಬೆಳವಣಿಗೆ ದಾಖಲಿಸುವುದು ಈ ಎರಡೂ ಸಮಿತಿಗಳ ಜವಾಬ್ದಾರಿಯಾಗಿದೆ.
ಇನ್ನು ಜುಲೈ 5 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಎರಡೂ ಸಮಿತಿಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಹೇಳಲಾಗಿದೆ.