ಕೇಂದ್ರ ಮಂತ್ರಿ ಮಂಡಲದ ಪ್ರಾತಿನಿಧ್ಯದ ವಿಷಯದಲ್ಲಿ ಮನಸ್ತಾಪ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಜೆಡಿಯು ತೆರೆ ಎಳೆದಿದೆ.
ಜೆಡಿಯು ಎನ್ ಡಿಎ ಮೈತ್ರಿಕೂಟದಲ್ಲಿ ಮುಂದುವರೆಯುವುದರ ಬಗ್ಗೆ ಉಂಟಾಗಿದ್ದ ಗೊಂದಲಗಳಿಗೆ ಜೆಡಿಯು ನಾಯಕ ರಾಮ್ ಪ್ರಸಾದ್ ಸಿಂಗ್ ಸ್ಪಷ್ಟನೆ ನೀಡಿದ್ದು, ನಾವು ಎನ್ ಡಿಎ ಜೊತೆಯಲ್ಲೇ ದೃಢವಾಗಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಮಂತ್ರಿ ಮಂಡಲ ರಚನೆ ವೇಳೆ ಎನ್ ಡಿಎ ಭಾಗವಾಗಿರುವ ಜೆಡಿಯುಗೆ ಕೇವಲ ಸಾಂಕೇತಿಕ ಪ್ರಾತಿನಿಧ್ಯ ನೀಡಲು ಒಂದು ಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ಹೇಳಿತ್ತು. ಆದರೆ ಸಾಂಕೇತಿಕ ಪ್ರಾತಿನಿಧ್ಯ ಅಗತ್ಯವಿಲ್ಲ ಎಂದು ಜೆಡಿಯು ಬಿಜೆಪಿ ಆಹ್ವಾನವನ್ನು ತಿರಸ್ಕರಿಸಿತ್ತು. ಈ ಬೆನ್ನಲ್ಲೇ ಎನ್ ಡಿಎ ಮೈತ್ರಿಕೂಟದಿಂದ ಮತ್ತೊಮ್ಮೆ ಜೆಡಿಯು ಹೊರನಡೆಯಲಿದೆ ಎಂಬ ಊಹಾಪೋಹ ಉಂಟಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಜೆಡಿಯು ಮಾಜಿ ಮಿತ್ರ ಪಕ್ಷ ಆರ್ ಜೆಡಿ ಮತ್ತೊಮ್ಮೆ ಜೆಡಿಯು ಜೊತೆ ಮೈತ್ರಿ ಬೆಳೆಸಲು ಯತ್ನಿಸಿತ್ತು.