ಅಯೋಧ್ಯೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕದಲ್ಲಿ ತಯಾರಿಸಲ್ಪಟ್ಟ ಶ್ರೀರಾಮನ ಮೂರ್ತಿಯನ್ನು ಅಯೋಧ್ಯೆಯ ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಉದ್ಘಾಟಿಸಿದರು.
7 ಅಡಿ ಎತ್ತರವಿರುವ ಉತ್ಕೃಷ್ಟ ಗುಣಮಟ್ಟದ ಬೀಟೆ ಮರದಿಂದ ತಯಾರಾದ ಈ ರಾಮನ ಮೂರ್ತಿಯನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ಕಾವೇರಿ ಎಂಪೋರಿಯಂನಿಂದ 35 ಲಕ್ಷ ಹಣ ನೀಡಿ ಖರೀದಿಸಲಾಗಿತ್ತು.
ಧನುರ್ಧಾರಿಯಾದ ಶ್ರೀರಾಮನ ವಿಗ್ರವಾಗಿರುವ ಇದನ್ನು ಶುಕ್ರವಾರ ಯೋಗಿ ಆದಿತ್ಯನಾಥ್ ಅಯೋಧ್ಯೆಯ ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಉದ್ಗಾಟಿಸಿದರು.
ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಶ್ರೀರಾಮ ಹಾಗೂ ಸೀತಾದೇವಿಯರ 2,500ಕ್ಕೂ ಹೆಚು ವಿಗ್ರಹಗಳು, ಪ್ರತಿಮೆಗಳಿದ್ದರೂ ಕೋದಂಡರಾಮ ಪ್ರತಿಮೆ ಇರಲಿಲ್ಲ. ಇದೇ ಕಾರಣದಿಂದ ಉತ್ತರ ಪ್ರದೇಶ ಸರ್ಕಾರ ಕರ್ನಾಟಕದಿಂದ ಈ ವಿಶೇಷ ಪ್ರತಿಮೆಯನ್ನು ಖರೀದಿಸಿ ಇದೀಗ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಾಗಿ ಇರಿಸಿದೆ.