ಲಖನೌ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಮಗೆ ಸುಪ್ರೀಂ ಕೋರ್ಟ್ ಇದ್ದಂತೆ. ಹೀಗಾಗಿ ರಾಮ ಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಅವರು ಸೋಮವಾರ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಕುರಿತು ಬಹುಮತದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 125 ಕೋಟಿ ಜನರ ಧ್ವನಿ ಮುಖ್ಯವಾಗುವುದಿಲ್ಲವೇ? ಎಂದು ಪ್ರಶ್ನಿಸಿರುವ ಶಿವಸೇನಾ ರಾಜ್ಯಸಭಾ ಸದಸ್ಯ, ಸುಪ್ರೀಂ ಕೋರ್ಟ್ ತನ್ನ ಕೆಲಸ ಮಾಡಲಿ. ಆದರೆ ನಮಗೆ ಹಲವು ದಾರಿಗಳಿವೆ ಎಂದಿದ್ದಾರೆ.
ನಮಗೆ ಮೋದಿಜೀ, ಅಮಿತ್ ಶಾ ಜೀ, ಯೋಗಿಜೀ ಮತ್ತು ಜನರೇ ಸುಪ್ರೀಂ ಕೋರ್ಟ್. ಲೋಕಸಭೆ ಚುನಾವಣೆ ವೇಳೆ ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ರದ್ದುಗೊಳಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಇವು ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳಾಗಿದ್ದು, ಜನ ಇದನ್ನು ಬೆಂಬಲ ಮತ ನೀಡಿದ್ದಾರೆ ಎಂದು ರೌತ್ ಎಎನ್ಐಗೆ ತಿಳಿಸಿದ್ದಾರೆ.
ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುವ ಮುನ್ನ ಮಾತನಾಡಿದ ಸಂಜಯ್ ರೌತ್, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.