ಕಿರ್ಗಿಸ್ತಾನಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ(ಎಸ್ ಸಿಒ)ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಎರಡು ದಿನಗಳ ಭೇಟಿಗಾಗಿ ಕಿರ್ಗಿಸ್ತಾನದ ಬಿಶ್ಕೆಕ್ ಗೆ ತೆರಳಿದ್ದಾರೆ.
ಶೃಂಗಸಭೆಯ ಹೊರಗೆ ಭಾರತ, ರಷ್ಯಾ ಮತ್ತು ಚೀನಾ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದೆ. ಶೃಂಗಸಭೆಯ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಸಭೆಯಲ್ಲಿ ಭಾರತ ಮಾತುಕತೆ ನಡೆಸಲಿದ್ದು ಕಿರ್ಗಿಸ್ತಾನ ಜೊತೆ ನಾಳೆ ಮಾತುಕತೆ ನಡೆಸಲಿದೆ.
ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸುತ್ತಿದ್ದಾರೆ. ಕಳೆದ ಫೆಬ್ರವರಿ 14ರ ಪುಲ್ವಾಮಾ ದಾಳಿ ಹಾಗೂ ಫೆಬ್ರವರಿ 26ರಂದು ಭಾರತದ ವಾಯುದಾಳಿ ನಂತರ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಪ್ರಧಾನಿ ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ.
ಆದರೆ ಇಬ್ಬರ ಮಧ್ಯೆ ಯಾವುದೇ ದ್ವಿಪಕ್ಷೀಯ ಮಾತುಕತೆಯ ಪ್ರಸ್ತಾಪವಿಲ್ಲ. ಪಾಕಿಸ್ತಾನ ಶಾಂತಿ ಮಾತುಕತೆಗೆ ಸಿದ್ದವಿದೆ ಎಂದು ಇತ್ತೀಚೆಗೆ ಇಮ್ರಾನ್ ಖಾನ್ ಪತ್ರ ಬರೆದಿದ್ದರು. ಆದರೆ ಭಾರತ ಅದಕ್ಕೆ ಒಪ್ಪಿಲ್ಲ. ಅಲ್ಲದೆ ಇತ್ತೀಚೆಗೆ ಆರಂಭದಲ್ಲಿ ಪಾಕಿಸ್ತಾನದ ವಾಯುಮಾರ್ಗವನ್ನು ಬಳಸಿ ಕಿರ್ಗಿಸ್ತಾನಕ್ಕೆ ಹೋಗಲು ಕೋರಿದ್ದ ಭಾರತ ನಂತರ ತಾನಾಗಿಯೇ ಹಿಂದೆ ಸರಿದು ಇಂದು ಒಮನ್ ಮತ್ತು ಇರಾನ್ ನ ವಾಯುಮಾರ್ಗವನ್ನು ಬಳಸಿ ಪ್ರಧಾನಿ ಹೋಗುತ್ತಿದ್ದಾರೆ.
2017ರಲ್ಲಿ ಭಾರತ ಮತ್ತು ಪಾಕಿಸ್ತಾನ ಎಸ್ ಸಿಒದ ಸಂಪೂರ್ಣ ಸದಸ್ಯತ್ವ ಪಡೆದವು. 2001ರಲ್ಲಿ ಸ್ಥಾಪನೆಯಾದ ಶಾಂಘೈ ಸಹಕಾರ ಸಂಘದಲ್ಲಿ ಚೀನಾ, ಕಜಕಿಸ್ತಾನ, ರಷ್ಯಾ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos