ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಷ್ಕರ ನಿರತ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ತಮಗೆ ಅಭದ್ರತೆಗೆ ಕಾಡುತ್ತಿದೆ ಎಂದು ಹೇಳಿ ಮಾತುಕತೆಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಇಂದು ಸಂಜೆ ಸಚಿವಾಲಯ ಕಚೇರಿಯಲ್ಲಿ ಮುಖ್ಯಮಂತ್ರಿಗಳು ಕರೆದಿರುವ ಸಂಧಾನ ಸಭೆಗೆ ಮುಷ್ಕರ ನಿರತ ಯಾವುದೇ ವೈದ್ಯರ ಪ್ರತಿನಿಧಿ ಹೋಗುತ್ತಿಲ್ಲ. ನಮಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ನಾವು ಯಾವುದೇ ಪ್ರತಿನಿಧಿಗಳನ್ನು ಕಳುಹಿಸುತ್ತಿಲ್ಲ ಎಂದು ಕಿರಿಯ ವೈದ್ಯರ ಸಂಘದ ವಕ್ತಾರರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ವೈದ್ಯರ ಪ್ರತಿನಿಧಿಯನ್ನು ಸಭೆಗೆ ಆಹ್ವಾನಿಸುವ ಬದಲು ಎನ್ಆರ್ ಎಸ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿರುವ ಗಾಯಾಳು ವೈದ್ಯರನ್ನು ಭೇಟಿ ಮಾಡಲಿ ಮತ್ತು ಅಲ್ಲೇ ವೈದ್ಯರೊಂದಿಗೆ ಮುಕ್ತ ಮಾತುಕತೆ ನಡೆಸಲಿ ಎಂದಿದ್ದಾರೆ.
ಎನ್ಆರ್ ಎಸ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲೇ ಮುಖ್ಯಮಂತ್ರಿಗಳು ಮುಷ್ಕರ ನಿರತ ವೈದ್ಯರನ್ನು ಭೇಟಿ ಮಾಡಲಿ ಮತ್ತು ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲಿ ಎಂದು ನಾವು ಅವರಿಗೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇವೆ ಎಂದಿದ್ದಾರೆ.