ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಗೆ ಬಹುಕೋಟಿ ರು. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ತಾನು ವೈದ್ಯಕೀಯ ತಪಾಸಣೆಗಾಗಿ ಭಾರತವನ್ನು ತೊರೆದಿದ್ದಾಗಿ ಹೇಳಿದ್ದಾನೆ.
ಸೋಮವಾರ ಬಾಂಬೆ ಹೈಕೋರ್ಟ್ಗೆ ವಿವರಣೆ ನಿಡಿದ ಚೋಕ್ಸಿ ತಾನು ವಿಚರಣೆಯನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದಿದ್ದಾನೆ. ಪ್ರಸ್ತುತ ಕೆರಿಬಿಯನ್ ರಾಷ್ಟ್ರವಾದ ಆಂಟಿಗುವಾದಲ್ಲಿ ನೆಲೆಸಿರುವ ಚೋಕ್ಸಿ ತಮ್ಮ ವಕೀಲ ವಿಜಯ್ ಅಗರ್ವಾಲ್ ಅವರ ಮೂಲಕ ಸೋಮವಾರ ಅಫಿಡವಿಟ್ ಸಲ್ಲಿಸಿದ್ದು, ವೈದ್ಯಕೀಯ ತಪಾಸಣೆ ಮತ್ತು ವಿದೇಶದಲ್ಲಿ ಚಿಕಿತ್ಸೆ ಪಡೆಯಲು 2018 ರ ಜನವರಿಯಲ್ಲಿ ದೇಶವನ್ನು ತೊರೆದಿದ್ದಾಗಿ ಹೇಳಿಕೆ ನಿಡಿದ್ದಾನೆ.
"ನಾನು ಅನುಮಾನಾಸ್ಪದವಾಗಿ ದೇಶ ತೊರೆದಿಲ್ಲ" ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.
ತನ್ನನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಜಾರಿ ನಿರ್ದೇಶನಾಲಯ (ಇಡಿ) ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಚೋಕ್ಸಿ ಅಫಿಡವಿಟ್ ಸಲ್ಲಿಸಿದ್ದನು.
ಆರೋಗ್ಯ ಸಮಸ್ಯೆಗಳಿರುವ ಕಾರಣ ನಾನು ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಚೋಕ್ಸಿ ಈ ಸಂಬಂಧ ನ್ಯಾಯಾಲಯಕ್ಕೆ ವಿವರಣೆ ನೀಡಿದ್ದಾನೆ.
ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರನ್ನು ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಪಿಎನ್ಬಿ ವಂಚನೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಗುರುತಿಸಿದೆ.ಈ ಬಹು ಕೋಟಿ ವಂಚನೆ 2018 ರ ಆರಂಭದಲ್ಲಿ ಬೆಳಕಿಗೆ ಬಂದಿತು.