ದೇಶ

ಇವಿಎಂ ದೂರುವುದೇ ಒಂದು ಹೊಸ ಕಾಯಿಲೆಯಾಗಿಬಿಟ್ಟಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

Lingaraj Badiger
ನವದೆಹಲಿ: ಕೆಲವರು ಇವಿಎಂ ವಿಚಾರವನ್ನು ಸದನದಲ್ಲೂ ಪ್ರಸ್ತಾಪಿಸುತ್ತಿದ್ದಾರೆ. ಚುನಾವಣೆ ಗೆಲುವಿಗೆ ಇವಿಎಂ ದೂರುವುದೇ ಒಂದು ಹೊಸ ಕಾಯಿಲೆಯಾಗಿಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈತರು ಕೇವಲ 2 ಸಾವಿರ ರುಪಾಯಿ ಯೋಜನೆಗಾಗಿ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದು ಹೇಳುವುದು ರೈತರಿಗೆ ಅವಮಾನ ಮಾಡಿದಂತೆ. ಇನ್ನು ಬಿಜೆಪಿ ಭರ್ಜರಿ ಗೆಲುವಿಗೆ ಮಾಧ್ಯಮಗಳೇ ಕಾರಣ ಎನ್ನುತ್ತಿರುವುದು ಆಘಾತಕಾರಿ ವಿಚಾರ. ಮಾಧ್ಯಮ ಮಾರಾಟಕ್ಕಿದೆಯೇ? ಹಾಗಾದರೆ ಇದೇ ಲಾಜಿಕ್ ತಮಿಳುನಾಡು ಮತ್ತು ಕೇರಳಕ್ಕೆ ಏಕೆ ಅನ್ವಸಲ್ಲ? ಎಂದು ಪ್ರಶ್ನಿಸಿದ್ದಾರೆ.
ಒಂದು ಕಾಲದಲ್ಲಿ ಸಂಸತ್ತಿನಲ್ಲಿ ನಾವು ಕೇವಲ ಇಬ್ಬರು ಸಂಸದರಿದ್ದಾಗ ನಮ್ಮ ಬಗ್ಗೆ ಜನ ತಮಾಷೆ ಮಾಡುತ್ತಿದ್ದರು. ಆದರೆ ನಾವು ಕಠಿಣ ಶ್ರಮದಿಂದ ಜನರ ವಿಶ್ವಾಸಗಳಿಸಿದೆವು. ನಾವು ಯಾವತ್ತೂ ಇವಿಎಂ ಅಥವಾ ಮತಗಟ್ಟೆಯನ್ನು ದೂರಲಿಲ್ಲ ಎಂದು ಪ್ರಧಾನಿ ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಚುನಾವಣಾ ಪ್ರಕ್ರಿಯೆಗಳು ಹೇಗೆ ಸುಧಾರಣೆಯಾಗಿವೆ ಎಂಬುದನ್ನು ನಾವು ಶ್ಲಾಘಿಸಬೇಕು. 1950ರಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ಪ್ರತಿ ಮತಗಟ್ಟೆಯಲೂ ಹಿಂಸಾಚಾರ ನಡೆಯುತ್ತಿತ್ತು. ಈಗ ತಂತ್ರಜ್ಞಾನದಿಂದ ಮತದಾನ ಶಾಂತಿಯುತವಾಗಿ ಸುರಕ್ಷಿತವಾಗಿ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಸುದೀರ್ಘ ಸಮಯದ ನಂತರ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಜನ ಸ್ಥಿರ ಸರ್ಕಾರ ಬಯಸಿ ಈ ತೀರ್ಪು ನೀಡಿದ್ದಾರೆ. ಆದರೆ ಕೆಲವು ನಾಯಕರು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಚುನಾವಣೆ ಗೆದ್ದಿವೆ. ಆದರೆ ದೇಶ ಮತ್ತು ಪ್ರಜಾಪ್ರಭುತ್ವ ಸೋತಿದೆ ಎಂದು ಹೇಳುತ್ತಿದ್ದಾರೆ. ಇಂತಹ ಹೇಳಿಕೆ ದುರದೃಷ್ಟಕರ ಎಂದು  ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಮತ್ತು ಮತದಾರರ ಬುದ್ಧಿವಂತಿಕೆಯನ್ನು ಏಕೆ ಪ್ರಶ್ನಿಸಬೇಕು? ಎಂದರು.
ಭಾರತ ವಯನಾಡಿನಲ್ಲಿ ಸೋತಿದೆಯೇ? ಭಾರತ ರಾಯ್ ಬರೇಲಿಯಲ್ಲಿ ಸೋತಿದೆಯೇ? ಕಾಂಗ್ರೆಸ್ ಸೋತರೆ ಭಾರತ ಸೋತಂತೆಯೇ? ದುರಹಂಕಾರಕ್ಕೂ ಒಂದು ಮಿತಿ ಇದೆ. ಕಾಂಗ್ರೆಸ್ 17 ರಾಜ್ಯಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
SCROLL FOR NEXT