ದೇಶ

ಲೋಕಸಭೆ: ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸುವಂತೆ ತೇಜಸ್ವಿ ಸೂರ್ಯ ಒತ್ತಾಯ

Nagaraja AB
ನವದೆಹಲಿ:  ಕರ್ನಾಟಕದ ಯುವಕರಿಗೆ ಗ್ರಾಮೀಣ ಬ್ಯಾಂಕುಗಳಲ್ಲಿ ಉದ್ಯೋಗ ಸಿಗಬೇಕು. ಅವರಿಗೆ ಅನ್ಯಾಯವಾಗದಂತಹ ರೀತಿಯಲ್ಲಿ  2014ಕ್ಕೆ ಮುಂಚಿನ ಅಧಿಸೂಚನೆಯಂತೆ  ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳಲ್ಲಿ ಅವಕಾಶ ಮಾಡಿಕೊಡಬೇಕೆಂದು  ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಮಹತ್ವಕ್ಕೆ ಸಂಬಂಧಿಸಿದ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಟ್ಟು, ಕರ್ನಾಟಕದಲ್ಲಿ ಬಿಜೆಪಿಗೆ 25 ಸ್ಥಾನಗಳನ್ನು ನೀಡಲಾಗಿದೆ. ಇಲ್ಲಿನ ಯುವಕರಿಗೆ ಗ್ರಾಮೀಣ ಬ್ಯಾಂಕುಗಳಲ್ಲಿ ಉದ್ಯೋಗಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕೆಂದು ಮನವಿ ಮಾಡಿಕೊಂಡರು.
2014ರಲ್ಲಿ ಬ್ಯಾಂಕಿಂಗ್ ನೇಮಕಾತಿಗೆ ಸಂಬಂಧಿಸಿದ ಹೊರಡಿಸಿದ ಅಧಿಸೂಚನೆಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ  ಆಫೀಸರ್ ಸ್ಕೇಲ್ 1 ಹಾಗೂ  ಆಫೀಸ್ ಅಸಿಸ್ಟಂಟ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸುವವರಿಗೆ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿರಬೇಕೆಂದು ಕಡ್ಡಾಯ ಮಾಡಲಾಗಿತ್ತು ಎಂದು ತಿಳಿಸಿದರು.
ಆದಾಗ್ಯೂ, 2014ರ ನಂತರ ಈ ಅಧಿಸೂಚನೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿಗಳು ನೇಮಕಾತಿ ಸಂದರ್ಭದಲ್ಲಿ  ಸ್ಥಳೀಯ ಭಾಷೆ ಅಗತ್ಯವಿಲ್ಲ,ಪರಿಣತಿ ಪಡೆಯುವ ಅವಧಿಯನ್ನು  ಆರು ವರ್ಷಗಳಿಂದ  1 ವರ್ಷಕ್ಕೆ  ವಿಸ್ತರಿಸಲಾಗುತ್ತದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಯುವಕರು ಉದ್ಯೋಗ ಪಡೆಯದಂತಾಗಿದೆ ಎಂದು ವಿವರಿಸಿದರು. 
SCROLL FOR NEXT