ಚೆನ್ನೈ: ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ಜನರು ನೀರಿಗಾಗಿ ಮಾಡುವ ಪ್ರತಿಭಟನೆಗಳನ್ನು ತಡೆಯಬೇಡಿ ಎಂದು ಮದ್ರಾಸ್ ಹೈಕೋರ್ಟ್ ಶನಿವಾರ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.
ಪ್ರತಿಭಟನೆಗೆ ಅನುಮತಿ ನೀಡದ ಪೊಲೀಸರ ಕ್ರಮ ಪ್ರಶ್ನಿಸಿ ಎನ್ ಜಿಒ ವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು, ಸರ್ಕಾರ ಪ್ರತಿಭಟನೆಗಳನ್ನು ತಡೆಯುವ ಬದಲು ಜಲಮೂಲಗಳ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಸಂಘ, ಸಂಸ್ಥೆಗಳೊಂದಿಗೆ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.
ಇದೇ ವೇಳೆ ನಗರದಲ್ಲಿ ಸದ್ಯದ ನೀರಿನ ಬಿಕ್ಕಟ್ಟನ್ನು ಎತ್ತಿ ತೋರಿಸಲು ಜೂನ್ 30ರಂದು ವಲ್ಲೂವರಕೊಟ್ಟಂ ಸಮೀಪಿ ಪ್ರತಿಭಟನೆ ನಡೆಸಲು ಎನ್ ಜಿಒಗೆ ಅನುಮತಿ ನೀಡುವಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ಕೋರ್ಟ್ ಸೂಚಿಸಿದೆ.
ನಗರದ ಪ್ರತಿ ಮೂಲೆಗೂ ನೀರು ಸರಬರಾಜು ಆಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪರಿಸ್ಥಿತಿಗಳಿಗೆ ಜನ ಜಾಗೃತಿಯೊಂದೆ ಪರಿಹಾರ. ಇಂತಹ ಸಂದರ್ಭಗಳಲ್ಲಿ ನಡೆಯುವ ಪ್ರತಿಭಟನೆಗಳನ್ನು ತಡೆಯಬಾರದು ಎಂದು ಕೋರ್ಟ್ ತಮಿಳುನಾಡು ಅಭಿಪ್ರಾಯಪಟ್ಟಿದೆ.