ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕೇದಾರಾನಾಥ ದೇವಾಲಯದ ಬಳಿ ಗುಹೆಯೊಂದರಲ್ಲಿ ಕುಳಿತು ಧ್ಯಾನ ಮಾಡಿದ ಬಳಿಕ ಆ ಗುಹೆಗೆ ಈಗ ಭಾರಿ ಡಿಮಾಂಡ್ ಬಂದಿದ್ದು, ಅಲ್ಲಿ ಕುಳಿತು ಧ್ಯಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಈ ಗುಹೆಯನ್ನು ಗರ್ವಾಲ್ ಮಂಡಲ್ ವಿಕಾಸ್ ನಿಗಮ ಲಿಮಿಟೆಡ್(ಜಿಎಂವಿಎನ್) ನಿರ್ವಹಿಸುತ್ತಿದ್ದು, ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಬುಕ್ ಮಾಡಬಹುದಾಗಿದೆ.
ಪ್ರಧಾನಿ ಮೋದಿ ಧ್ಯಾನಕ್ಕೆ ಕುಳಿತ ಗುಹೆಗೆ ಒಂದು ದಿನಕ್ಕೆ 1500 ರೂ. ಬಾಡಿಗೆ ನಿಗದಿಪಡಿಸಲಾಗಿದ್ದು, ಈಗಾಗಲೇ ಜುಲೈ ತಿಂಗಳ ಪೂರ್ತಿ ಧ್ಯಾನಗುಹೆ ಬುಕ್ ಆಗಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಕೆಲ ದಿನಾಂಕಗಳು ಮುಂಗಡ ಬುಕ್ ಆಗಿವೆ ಎಂದು ಜೆಎಂವಿಎನ್ ಪ್ರಧಾನ ವ್ಯವಸ್ಥಾಪಕ ಬಿಎಲ್ ರಾಣಾ ಅವರು ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಈ ಗುಹೆಯಲ್ಲಿ ಧ್ಯಾನ ಮಾಡಿದ ಬಳಿಕ ಒಂದು ದಿನವೂ ಈ ಗುಹೆ ಖಾಲಿ ಉಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಗುಹೆಯಲ್ಲಿ ಧ್ಯಾನ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಎಂವಿಎನ್, ಸುಮಾರು 12,500 ಅಡಿ ಎತ್ತರದಲ್ಲಿ ಇನ್ನೂ ಮೂರು ಗುಹೆಯಗಳನ್ನು ನಿರ್ಮಿಸಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೇ 18ರಂದು ಧ್ಯಾನಕ್ಕಾಗಿ ರುದ್ರ ಮೆಡಿಟೇಷನ್ ಕೇವ್ ಆಯ್ಕೆ ಮಾಡಿಕೊಂಡಿದ್ದರು. ಈ ಗುಹೆಯು ಕೇದಾರನಾಥ ಮಂದಿರದಿಂದ ಒಂದು ಕಿ.ಮೀ. ದೂರದಲ್ಲಿದ್ದು, ನಡೆದೇ ಈ ಪ್ರದೇಶವನ್ನು ತಲುಪಬಹುದು.