ಅಮರಾವತಿ: ಬೆಂಗಳೂರಿನಿಂದ ಜಾರ್ಖಂಡ್ಗೆ ಹೊರಟಿದ್ದ ಯಶವಂತಪುರ-ಟಾಟಾನಗರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈ ರೈಲು ಬೆಂಗಳೂರಿನ ಯಶವಂತಪುರದಿಂದ ಜಾರ್ಖಂಡ್ ನ ಜಮ್ಶೆಡ್ಪುರಕ್ಕೆ ಹೊರಟಿತ್ತು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಸಮೀಪ ರೈಲಿನ ಕ್ಯಾಟರಿಂಗ್ ಬೋಗಿಯಲ್ಲಿ (ಅಡುಗೆ ಕೋಣೆ) ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ 2 ಗಂಟೆ ವೇಳೆಗೆ ಅಗ್ನಿಅವಘಡ ನಡೆದಿದೆ. ಕ್ಷಣ ಮಾತ್ರದಲ್ಲಿ ಬೆಂಕಿ ಇಡೀ ಬೋಗಿ ಆವರಿಸಿತ್ತು.
ಇನ್ನು ರೈಲಿನ ಅಡುಗೆ ಕೋಣೆಯ ಬೋಗಿಗೆ ಬೆಂಕಿ ಅವರಿಸುತ್ತಿದ್ದಂತೆಯೇ ಎಚ್ಚೆತ್ತ ರೈಲ್ವೇ ಸಿಬ್ಬಂದಿ ಕೂಡಲೇ ರೈಲಿನಿಂದ ಬೋಗಿಯನ್ನು ಬೇರ್ಪಡಿಸುವ ಮೂಲಕ ಮುಂದಾಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ನಂತರ ರೈಲಿನಲ್ಲಿದ್ದ ಪ್ರಯಾಣಿಕರು ಒಮ್ಮೆ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಕೆಲ ಹೊತ್ತಿನಲ್ಲೇ ಪರಿಸ್ಥಿತಿ ತಿಳಿಯಾಯಿತು. ಈ ಅಗ್ನಿ ಅವಘಡದಿಂದ ಈ ಭಾಗದಲ್ಲಿ ರೈಲ್ವೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲ ರೈಲುಗಳು ತಡವಾಗಿ ಸಂಚರಿಸಿವೆ. ಬೆಂಕಿ ಆರಿದ ನಂತರ ರೈಲನ್ನು ಬೇರೆಡೆ ತೆಗೆದುಕೊಂಡು ಹೋಗಲಾಗಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.