ದೇಶ

ಮೋದಿ ಆಡಳಿತಾವಧಿಯಲ್ಲಿ ಬಡತನ ಹೆಚ್ಚಳ: ಅಧಿಕಾರಕ್ಕೆ ಬಂದರೆ ನಿರ್ಮೂಲನೆ- ರಾಹುಲ್

Nagaraja AB

ಮೊಗಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಬಡತನ ಹೆಚ್ಚಾಗಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ಬಡತನವನ್ನು ನಿರ್ಮೂಲನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

 ಪಂಜಾಬ್ ರಾಜ್ಯದ ಮೊಗಾದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಕಾರಣದಿಂದಾಗಿ ಭಾರತದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿದೆ. ನಾವು  ಅಧಿಕಾರಕ್ಕೆ ಬಂದರೆ ಅದನ್ನು ನಿರ್ಮೂಲನೆ ಮಾಡುತ್ತೇವೆ ಎಂದರು.

ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ದ್ವೇಷವನ್ನು ಹರಡುತ್ತಿದ್ದಾರೆ. ಗುರು ನಾನಕ್ ಅವರು ಜೀವನದುದ್ದಕ್ಕೂ ಇವುಗಳ ವಿರುದ್ಧ ಹೋರಾಟ ನಡೆಸಿದ್ದರು. ಆದರೆ, ಅವರ ಚಿಂತನೆಗಳ ಮೇಲೆ ಆಕ್ರಮಣ ನಡೆಸಲಾಗಿತ್ತು ಎಂದು ರಾಹುಲ್ ಗಾಂಧಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿವರ್ಷ 2 ಕೋಟಿ ಉದ್ಯೋಗ, ಪ್ರತಿಯೊಬ್ಬರಿಗೂ 15 ಲಕ್ಷ ಹಣ ಸೇರಿದಂತೆ ಹಲವು ಸುಳ್ಳು ಭರವಸೆಗಳನ್ನು ನೀಡಿದ್ದರು. ಆದರೆ, ಯಾರಾದರೂ 15 ಲಕ್ಷ ರೂಪಾಯಿ ಪಡೆದಿದ್ದೀರಾ?  ಎಂದು ಅವರು ಪ್ರಶ್ನಿಸಿದರು.
ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನಮ್ಮ ವಾಯುಪಡೆಯ ಸೈನಿಕರು ಪಾಕಿಸ್ತಾನದಲ್ಲಿ ಬಾಂಬ್ ಹಾಕುತ್ತಾರೆ. ಪ್ರಧಾನಿ ಮೋದಿ  ವಾಯುಪಡೆಯಿಂದ 30 ಸಾವಿರ ಕೋಟಿ ರೂ. ಪಡೆದುಕೊಂಡು  ಅವರ ಸ್ನೇಹಿತ ಅನಿಲ್ ಅಂಬಾನಿ ಜೀಬಿಗೆ ಹಾಕುತ್ತಾರೆ ಎಂದು ಆರೋಪಿಸಿದರು.
SCROLL FOR NEXT