ಲಖನೌ: ಇಬ್ಬರು ಕಾಶ್ಮೀರಿ ವ್ಯಾಪಾರಿಗಳ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌನ ಡಾಲಿಗಂಜ್ ಪ್ರದೇಶದಲ್ಲಿ ನಡೆದಿದೆ. ಘಟನೆ ವಿಡಿಯೋ ಚಿತ್ರೀಕರಣವಾಗಿದ್ದು ಸಾಮಾಜಿಕ ತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ.
ಬುಧವಾರ ಸಂಜೆ ನಡೆದ ಘಟನೆಯಲ್ಲಿ ಒಣ ಹಣ್ಣು (ಡ್ರೈ ಫ್ರುಟ್ಸ್) ವ್ಯಾಪಾರ ಮಾಡುತ್ತಿದ್ದ ಕಾಶ್ಮೀರಿ ಯುವಕರಿಬ್ಬರ ಮೇಲೆ ಗುಂಪು ಹಲ್ಲೆ ನಡೆದಿದೆ. ಗುಂಪಿನಲ್ಲಿದ್ದವರು ಕೇಸರಿ ಬಟ್ಟೆಗಳನ್ನು ಧರಿಸಿದ್ದು ಅವರು ವ್ಯಾಪಾರಿಗಳಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಕಾಣಬಹುದು.
ಈ ವೇಳೆ ಸ್ಥಳೀಯರು ಈ ಹಲ್ಲೆಯಿಂದ ಯುವಕರನ್ನು ಪಾರುಮಾಡಲು ಮುಂದಾಗಿದ್ದಾರೆ ಅಲ್ಲದೆ ಪೋಲೀಸರಿಗೆ ಮಾಹಿತಿ ಒದಗಿಸಿದ್ದಾರೆ. ಹಸನ್ ಗಂಜ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯ ಆರೋಪಿಎಂದು ಗುರುತಿಸಲಾಗಿರುವ ಬಜ್ರಂಜ್ ಸೋಂಕರ್ ಎಂಬಾತನನ್ನು ಬಂಧಿಸಲಾಗಿದೆ. ಆತ ವಿಶ್ವ ಹಿಂದೂ ದಳದ ಅಧ್ಯಕ್ಷ ಎಂದು ಹೇಳಲಾಗಿದೆ.
ಫೆಬ್ರವರಿ 14ರಂದು ಪುಲ್ವಾಮಾ ದಾಳಿಯಲ್ಲಿ ನಲವತ್ತಕ್ಕೆ ಹೆಚ್ಚು ಯೋಧರು ಹುತಾತ್ಮರಾದ ಬಳಿಕ ದೇಶಾದ್ಯಂತ ಕಾಶ್ಮೀರಿ ವ್ಯಕ್ತಿಗಳ ಮೇಲೆ ಹಲ್ಲೆ , ಕಿರುಕುಳದ ಘಟನೆಗಳು ವರದಿಯಾಗಿದೆ. ವಿಶೇಷವಾಗಿ ದೇಶದ ನಾನಾ ಭಾಗಗಳಲ್ಲಿ ಕಲಿಯುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದ ಪ್ರಕರಣ ಬಹಿರಂಗವಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos