ನವದೆಹಲಿ: ರಾಜ್ಯ ಸರ್ಕಾರಗಳು ಗುರುತಿಸಿರುವ 45 ಸಾವಿರಕ್ಕೂ ಅಧಿಕ ಮಲ ಹೊರುವ ಕಾರ್ಮಿಕರ ಪೈಕಿ ಶೇಕಡಾ 37ಕ್ಕೂ ಅಧಿಕ ಮಂದಿಗೆ ಸರ್ಕಾರದ ಪುನರ್ವಸತಿ ಯೋಜನೆಯಡಿ ಸಿಗಬೇಕಾದ ನಗದು ಹಣದ ನೆರವು ಇನ್ನೂ ಕೂಡ ಸಿಕ್ಕಿಲ್ಲ.
2013ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಕಿಅಂಶ ಲಭ್ಯವಾಗಿದ್ದು ಆ ವರ್ಷ ವಿವಿಧ ರಾಜ್ಯಗಳಲ್ಲಿ 13,770 ಮಲ ಹೊರುವ ಕಾರ್ಮಿಕರನ್ನು ಗುರುತಿಸಲಾಗಿತ್ತು. ಕೇಂದ್ರ ಸರ್ಕಾರದ ಪುನರ್ವಸತಿ ಯೋಜನೆಯಡಿ ಮಲ ಹೊರುವ ಕಾರ್ಮಿಕರಿಗೆ 40 ಸಾವಿರ ರೂಪಾಯಿ ಹಣಕಾಸಿನ ನೆರವು ನೀಡಿ ಅವರನ್ನು ಈ ಕೆಟ್ಟ ಸಂಪ್ರದಾಯದ ಕೆಲಸಗಳಿಂದ ಹೊರಗೆ ತರುವುದು ಉದ್ದೇಶವಾಗಿದೆ.
ಇಲ್ಲಿಯವರೆಗೆ ಕಳೆದ ವರ್ಷದವರೆಗೆ ನಡೆಸಿರುವ ಅಂಕಿಅಂಶ ಪ್ರಕಾರ 30 ಸಾವಿರಕ್ಕೂ ಅಧಿಕ ಮಲ ಹೊರುವ ಕಾರ್ಮಿಕರನ್ನು ಗುರುತಿಸಲಾಗಿದೆ. ಅವರಲ್ಲಿ ಸುಮಾರು 16 ಸಾವಿರ ಮಂದಿಗೆ ಮಾತ್ರ ಕೇಂದ್ರ ಸರ್ಕಾರದ ಹಣಕಾಸಿನ ನೆರವು ಸಿಕ್ಕಿದೆಯಷ್ಟೆ. 2013ರಲ್ಲಿ ಸಹಾಯ ಸಿಕ್ಕಿದ ಮಲ ಹೊರುವ ಕಾರ್ಮಿಕರು ಮತ್ತು ಸದ್ಯ ನಡೆದ ಸಮೀಕ್ಷೆ ಪ್ರಕಾರ ಸುಮಾರು 28 ಸಾವಿರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಸಿಗಬೇಕಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ವರೆಗೆ ನಡೆದ ಸಮೀಕ್ಷೆ ಪ್ರಕಾರ, 20 ಸಾವಿರಕ್ಕೂ ಅಧಿಕ ಮಲ ಹೊರುವ ಕಾರ್ಮಿಕರನ್ನು ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ತಿಳಿಸಿದ್ದು ಅವರಲ್ಲಿ 8 ಸಾವಿರ ಮಂದಿಗೆ ಧನ ಸಹಾಯ ದೊರಕಿದೆ.