ನವದೆಹಲಿ: ಕನಿಷ್ಠ ಪಕ್ಷ ಈಗಲಾದರೂ ಕೇಂದ್ರದಲ್ಲಿ ಸರ್ಕಾರ ಬದಲಾವಣೆಯಾಗುವ ಮುನ್ನ ಒಂದು ಪತ್ರಿಕಾಗೋಷ್ಠಿ ನಡೆಸಿ ಎಂದು ಬಿಜೆಪಿ ಬಂಡಾಯ ಸಂಸದ ಶತ್ರುಘ್ನ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ಒಂದು ವೇಳೆ ನೀವು ಈಗಲೂ ಪತ್ರಿಕಾಗೋಷ್ಠಿ ನಡೆಸದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಗಳ ಆಡಳಿತದಲ್ಲಿ ಮಾಧ್ಯಮಗಳೊಂದಿಗೆ ಒಂದೇ ಒಂದು ಪ್ರಶ್ನೋತ್ತರ ಗೋಷ್ಠಿ ನಡೆಸದ ಏಕೈಕ ಪ್ರಧಾನಿಯಾಗಿ ಇತಿಹಾಸ ಪುಟ ಸೇರುತ್ತಿರಿ ಎಂದು ಸಿನ್ಹಾ ಟ್ವಿಟ್ ಮಾಡಿದ್ದಾರೆ.
ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಪಾಟ್ನಾ ಸಾಹೀಬ್ ಕ್ಷೇತ್ರದ ಸಂಸದ ಶತ್ರುಜ್ಞ ಸಿನ್ಹಾ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಗ ಚುನಾವಣೆ ದಿನಾಂಕ ಪ್ರಕಟವಾಗಿದೆ. ಈಗಲಾದರೂ ಒಂದು ಪತ್ರಿಕಾಗೋಷ್ಠಿ ನಡೆಸಿ ಎಂದು ಆಗ್ರಹಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಮೋದಿ, ಹೊಸ ಮತ್ತು ಅತ್ಯುತ್ತಮ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರ ಬದಲಾವಣೆಯಾಗುವ ಮುನ್ನಇದು ಸರಿಯಾದ ಮತ್ತು ಅತ್ಯಂತ ಸೂಕ್ತ ಸಮಯ ಎಂದು ನಿಮಗೆ ಅನಿಸುವುದಿಲ್ಲವೇ ಎಂದು ಸಿನ್ಹಾ ಪ್ರಶ್ನಿಸಿದ್ದಾರೆ.
ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಹಾಗೂ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಶತ್ರುಘ್ನ ಸಿನ್ಹಾ ಅವರು ಈ ಬಾರಿ ಮಹಾಘಟಬಂಧನ್ ದಿಂದ ಆಖಾಡಕ್ಕಿಳಿಯಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos