ನವದೆಹಲಿ: ಜಾಗತಿಕ ಉಗ್ರ ಪಟ್ಟಿಗೆ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ನನ್ನು ಸೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದು, ಇದು ಭಾರತದ ಅತೀ ದೊಡ್ಡ ರಾಜತಾಂತ್ರಿಕ ದುರಂತ ಎಂದು ಕಾಂಗ್ರೆಸ್ ಟೀಕಿಸಿದೆ.
ನಿನ್ನೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮೂಲದ ಜೈಶ್ ಇ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನಾ ದೇಶ ಮತ್ತೆ ಅಡ್ಡಿಯಾಗಿದ್ದು, ಭಾರತದ ನಡೆಗೆ ಹಿನ್ನಡೆಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ಇದು ಮೋದಿ ಸರ್ಕಾರದ ರಾಜತಾಂತ್ರಿಕ ದುರಂತ ಎಂದು ಬಣ್ಣಿಸಿದೆ.
ಇದೇ ವೇಳೆ ಚೀನಾದ ನಡೆಯನ್ನೂ ಟೀಕಿಸಿರುವ ಕಾಂಗ್ರೆಸ್, ಪುಲ್ವಾಮ ಉಗ್ರ ದಾಳಿ ಹಿಂದೆ ಮಸೂದ್ ಅಜರ್ ಮತ್ತು ಆತನ ಸಂಘಟನೆಯ ಪಾತ್ರವಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಚೀನಾ ಪದೇ ಪದೇ ಭಾರತದ ಪ್ರಯತ್ನಕ್ಕೆ ತಡೆ ನೀಡುವುದು ಸರಿಯಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಇದು ಹಿನ್ನಡೆಯಾಗಿದೆ. ಇದು ಮೋದಿ ಸರ್ಕಾರದ ವಿದೇಶಾಂಗ ನೀತಿ ಸರಣಿ ವೈಫಲ್ಯ ಹೊಂದುತ್ತಿದೆ ಎಂದು ಟೀಕಿಸಿದ್ದಾರೆ.