ಕೋಲ್ಕತ್ತಾ: ರೈಲ್ವೆ ಚಾಲಕನೊಬ್ಬನ ಸಮಯಪ್ರಜ್ಞೆಯ ಕಾರಣ ಆನೆ ಹಿಂಡೊಂದರ ಪ್ರಾಣ ಉಳಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.ಅಲಿಪುರ್ ದುವಾರ್-ಸಿಲಿಗುರಿ ಇಂಟರ್ಸಿಟಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 15768) ನ ಲೋಕೋ ಪೈಲಟ್ ನ ಜಾಗರೂಕತೆಯಿಂದಾಗಿ ಆನೆ ಹಿಂಡೊಂದು ರೈಲಿನಡಿ ಸಿಕ್ಕು ಸಾವನ್ನಪ್ಪುವುದು ತಪ್ಪಿದೆ.
ಲೋಕೋ ಪೈಲಟ್ ಎಸ್, ಶರ್ಮಾ ಗುರುವಾರ ಬೆಳಿಗ್ಗೆ 6:15ರ ಸುಮಾರಿಗೆ ರೈಲು ಚಲಾಯಿಸುತ್ತಿದ್ದ ವೇಳೆ ರೈಲ್ವೆ ಹಳಿ ದಾಟುತ್ತಿದ್ದ ಆನೆಗಳ ಹಿಂಡನ್ನು ಪತ್ತೆ ಮಾಡಿದ್ದಾರೆ. ತಕ್ಷಣ ತುರ್ತು ಬ್ರೇಕ್ ಒತ್ತುವ ಮೂಲಕ ವೇಗವಾಗಿ ಸಾಗುತ್ತಿದ್ದ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರೈಲಿನಡಿ ಸಿಕ್ಕು ಸಾಯಬಹುದಾಗಿದ್ದ ಹಲವು ಆನೆಗಳ ಜೀವ ಕಾಪಾಡಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ಭಾಗ ಅಲಿಪುರ್ ಒಂದು ಆನೆ ಕಾರಿಡಾರ್ ಆಗಿದ್ದು ಭಾರೀ ಅರಣ್ಯ ಪ್ರದೇಶಗಳನು ಸಹ ಒಳಗೊಂಡಿದೆ. ಇದೇ ಹಾದಿಯಲ್ಲಿ ರೈಲ್ವೆ ಟ್ರ್ಯಾಕ್ ಸಹ ಇದ್ದು ಅರಣ್ಯ ಪ್ರದೇಶ, ಆನೆ ಕಾರಿಡಾರ್ ನಡುವೆಯೇ ರೈಲುಗಳು ಸಂಚರಿಸುತ್ತವೆ. ಈ ಹಿಂದೆ ಅನೇಕ ಬಾರಿ ವನ್ಯಜೀವಿಗಳು ವೇಗವಾಗಿ ಆಗಮಿಸುವ ರೈಲಿನಡಿ ಸಿಕ್ಕು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದೆ.