ನವದೆಹಲಿ: ಅಂತಿಮ ಗಡುವು ಮುಕ್ತಾಯವಾಗಿದ್ದು, ತಾವು ಇನ್ನು ಲೋಕ್ಪಾಲ್ ಸಮಿತಿ ಸಭೆಗೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ನಡೆಯಲಿರುವ ಲೋಕ್ಪಾಲ್ ಸಮಿತಿ ಸಭೆಗೆ ಬಹಿಷ್ಕಾರ ಹಾಕಲು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ತೀರ್ಮಾನಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಲವಾಗಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಖರ್ಗೆ, 'ವಿಶೇಷ ಆಹ್ವಾನಿತ ಲೋಕಪಾಲ್ ಆಯ್ಕೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ನಿಯಮವೇನಿಲ್ಲ. ವಿರೋಧ ಪಕ್ಷಗಳ ಧ್ವನಿ ಅಡಗಿಸುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಅತಿದೊಡ್ಡ ವಿರೋಧ ಪಕ್ಷದ ಲೋಕಪಾಲ್ ಆಯ್ಕೆ ಸಮಿತಿ ಸದಸ್ಯನನ್ನು ಒಳಗೊಂಡಂತೆ 2014 ರಿಂದೀಚೆಗೆ ಲೋಕಪಾಲ್ ಕಾಯಿದೆಯ ಸಂಬಂಧಿತ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಯಾವುದೇ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ ಎಂದೂ ಖರ್ಗೆ ಆರೋಪಿಸಿದ್ದಾರೆ.
ದೇಶದ ಮೊದಲ ಲೋಕಪಾಲ್ ನೇಮಕ ಸಮಿತಿ ಮತ್ತು ಅದರ ಸದಸ್ಯರ ನೇಮಕಕ್ಕೆ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಸಭೆ ಸೇರಲು ಇನ್ನು 10 ದಿನಗಳಲ್ಲಿ ದಿನಾಂಕ ನಿಗದಿ ಮಾಡುವಂತೆ ಮಾರ್ಚ್ 7ರಂದು ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.