ಪಣಜಿ: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನೊಂದಿಗೆ ಸತತವಾಗಿ ಹೋರಾಟ ಮಾಡಿ ನಿನ್ನೆ ಕೊನೆಯುಸಿರೆಳಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು, ತಮ್ಮ ಕೊನೆಯ ಉಸಿರಿರುವರೆಗೂ ಜನತೆಗಾಗಿ ದುಡಿಯಬೇಕು ಎಂದು ಹೇಳಿದ್ದರಂತೆ.
ಹೌದು.. ತಮ್ಮ ಜೀವನದ ಕಟ್ಟಕಡೆಯ ಕ್ಷಣದವರೆಗೂ ಗೋವಾ ಸಿಎಂ ಆಗಿ ಕೆಲಸ ಮಾಡಿದ್ದ ಮನೋಹರ್ ಪರಿಕ್ಕರ್ ಅವರು, ಇದೀಗ ತಮ್ಮ ಕೊನೆಯ ಆಸೆಯಂತೆಯೇ ತಮ್ಮ ಕೊನೆಯ ಉಸಿರಿರುವರೆಗೂ ಗೋವಾ ಜನತೆಗಾಗಿ ದುಡಿದು ಇದೀಗ ಚಿರ ವಿಶ್ರಾಂತಿಗೆ ತೆರಳಿದ್ದಾರೆ.
ಪರಿಕ್ಕರ್ ಕಳೆದ ಒಂದೂವರೆ ವರ್ಷದಿಂದ ಕ್ಯಾನ್ಸರ್ ಪೀಡಿತರಾಗಿ, ದೆಹಲಿಯ ಏಮ್ಸ್ ಹಾಗೂ ಉನ್ನತ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿ ಬಂದ ಬಳಿಕವೂ, ಕೊಂಚವೂ ವಿರಮಿಸದೇ, ಕರ್ತವ್ಯಕ್ಕೆ ಹಾಜರಾಗಿ, ಎಂದಿನಂತೆ ಸಕ್ರಿಯರಾಗಿದ್ದರು. ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದರೂ ರಾಜ್ಯದ ಅಭಿವೃದ್ಧಿ ಕೆಲಸಗಳ ಖುದ್ದು ಮೇಲುಸ್ತುವಾರಿ ವಹಿಸಿದ್ದ ಪರ್ರಿಕರ್, ಮೂಗಿಗೆ ಕೊಳವೆ ಹಾಕಿಕೊಂಡೇ ವಿಧಾನಸಭೆಯಲ್ಲಿ ಹಾಜರಾಗುತ್ತಿದ್ದರು. ಅಂತೆಯೇ ಮೂಗಿಗೆ ಪೈಪ್ ಗಳನ್ನು ಹಾಕಿಕೊಂಡೇ ಗೋವಾ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸುತ್ತಿದ್ದ ಅವರ ಫೋಟೋಗಳು ವೈರಲ್ ಆಗಿತ್ತು.
ಜನವರಿಯಲ್ಲಿ ಮಾಂಡೋವಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಟಲ್ ಸೇತುವೆ ಉದ್ಘಾಟಿಸಿ, ಜನರನ್ನುದ್ದೇಶಿಸಿ ಮಾತನಾಡಿ, ಆಗಿ ತಾನೇ ಬಿಡುಗಡೆ ಆಗಿದ್ದ ಉರಿ ಚಿತ್ರದ ಸಾಲುಗಳನ್ನು ಉದ್ಧರಿಸಿ ಪರಿಕ್ಕರ್, “How’s the Josh” ಎಂದಿದ್ದರು. ಪರ್ರಿಕರ್ ಉತ್ಸಾಹವನ್ನು ಕಂಡು ಇಡೀ ಜನಸ್ತೋಮ ಪುಳಕಿತರಾದರು. ಅಂತೆಯೇ ಅಂದಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪರಿಕ್ಕರ್ ನಾನು ನನ್ನ ಕೊನೆಯ ಉಸಿರಿರುವರೆಗೂ ಗೋವಾಗಾಗಿ ದುಡಿಯುತ್ತೇನೆ ಎಂದು ಹೇಳಿದ್ದರು. ಅಂತೆಯೇ ಇದೀಗ ತಮ್ಮ ಕೊನೆಯ ಉಸಿರಿನ ಅಂತ್ಯದವರೆಗೂ ಅವರು ಗೋವಾ ಸಿಎಂ ಆಗಿ ನಿನ್ನೆ ಇಹಲೋಕ್ಯ ತ್ಯಜಿಸಿದ್ದಾರೆ.