ಪಣಜಿ: ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಗೋವಾದ ನೂತನ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಮನೋಹರ್ ಪರಿಕ್ಕರ್ ಅವರ ನಿಧನದಿಂದಾಗಿ ಗೋವಾದಲ್ಲಿ ಭುಗಿಲೆದ್ದಿದ್ದ ಸರ್ಕಾರ ರಚನೆ ಕಸರತ್ತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ತರಾತುರಿಯಲ್ಲಿ ಸ್ಪೀಕರ್ ಆಗಿದ್ದ ಪ್ರಮೋದ್ ಸಾವಂತ್ ರನ್ನು ಮೈತ್ರಿ ಸರ್ಕಾರದ ಸಿಎಂ ಆಗಿ ಆಯ್ಕೆ ಮಾಡಿತ್ತು. ಅದರಂತೆ ನಿನ್ನೆ ತಡರಾತ್ರಿ 2 ಗಂಟೆಯಲ್ಲಿ ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದೀಗ ಇಂದು ಬೆಳಗ್ಗೆ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಮತ್ತು ರಾಜ್ಯದ ಜನತಗೆ ಸ್ಥಿರ ಸರ್ಕಾರವನ್ನು ನೀಡುವ ಜವಾಬ್ದಾರಿ ಕೂಡ ತಮ್ಮ ಮೇಲಿದೆ. ಬಾಕಿ ಉಳಿದಿರುವ ಕಾರ್ಯಗಳನ್ನು ತಮ್ಮ ಸರ್ಕಾರ ಪೂರ್ಣಗೊಳಿಸಲಿದೆ. ಬಹುಶಃ ನಾನು ಮನೋಹರ್ ಪರಿಕ್ಕರ್ ಅವರ ಮಟ್ಟಿಕ್ಕೆ ಕೆಲಸ ಮಾಡದೇ ಇರಬಹುದು. ಆದರೆ ನನ್ನ ಶಕ್ತಿ ಮೀರಿ ಗೋವಾ ಜನತೆಗಾಗಿ ದುಡಿಯುತ್ತೇನೆ ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ.