ಚೆನ್ನೈ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಎಂಡಿಎಂಕೆ, ಸಿಪಿಐ ಹಾಗೂ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಮಂಗಳವಾರ ಚುನಾವಣಾ ಬಿಡುಗಡೆ ಮಾಡಿದ್ದು, ರಾಜೀವ್ ಗಾಂಧಿ ಹಂತಕರ ಬಿಡುಗಡೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಳೆದ 27 ವರ್ಷಗಳಿಂದ ಜೈಲಿನಲ್ಲಿರುವ ರಾಜೀವ್ ಗಾಂಧಿ ಹಂತಕರ ಬಿಡುಗಡೆ, ಶ್ರೀಲಂಕಾ ನಿರಾಶ್ರಿತರಿಗೆ ಭಾರತದ ಪೌರತ್ವ, ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಎಲ್ಲಾ ಸಾಲ ಹಾಗೂ ಶಿಕ್ಷಣ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.
ಅರ್ಧಕ್ಕೆ ನಿಂತು ಹೋಗಿರುವ ಸೇತುಸಮುದ್ರಂ ಯೋಜನೆಯನ್ನು ಪುನರಾರಂಭಗೊಳಿಸುವುದು, ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ದರವನ್ನು ನಿಯಂತ್ರಣದಲ್ಲಿರಿಸುವುದು. ಕಾವೇರಿ ಹಾಗೂ ಗೋದಾವರಿ ನದಿ ಯೋಜನೆಗಳನ್ನು ಜೋಡಿಸುವುದು. ಕೊಡನಾಡು ಎಸ್ಟೇಟ್ ದರೋಡೆ ಪ್ರಕರಣವನ್ನು ಸಿಬಿಐಗೆ ವಹಿಸುವುದು. ಪುದುಚೇರಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡುವುದು. ಸೇತು ಸಮುದ್ರ ಯೋಜನೆಯನ್ನು ಪುನರ್ ಆರಂಭಿಸುವುದು, ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿ ಹಾಗೂ ನೀಟ್ ರದ್ದುಗೊಳಿಸುವುದು ಸೇರಿದಂತೆ ಡಿಎಂಕೆ ಅನೇಕ ಭರವಸೆಗಳನ್ನು ನೀಡಿದೆ.