ದೇಶ

ಗೋವಾ ಸಿಎಂ ಪ್ರಮೋದ್ ಸಾವಂತ್ ಅಧಿಕಾರ ಸ್ವೀಕಾರ; ನಾಳೆ ವಿಶ್ವಾಸಮತ ಯಾಚನೆ

Srinivasamurthy VN
ಪಣಜಿ: ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಅವರ ಸಾವಿನ ಬೆನ್ನಲ್ಲೇ ಗೋವಾದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದು, ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯೇ ಮಧ್ಯರಾತ್ರಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಮೋದ್ ಸಾವಂತ್ ನಾಳೆ ಗೋವಾ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.
ಹೌದು.. ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸಿಎಂ ಗಾದಿಗೇರಿದ್ದ ಬಿಜೆಪಿ ಪಕ್ಷದ ನಿಷ್ಠಾವಂತ ಮುಖಂಡ ಹಾಗೂ ಗೋವಾದ ನೂತನ ಸಿಎಂ ಪ್ರಮೋದ್ ಸಾವಂತ್ ಅವರಿಗೆ ನಾಳೆ ಮೊದಲ ಅಗ್ನಿ ಪರೀಕ್ಷೆ ಎದುರಾಗಲಿದ್ದು, ಗೋವಾ ವಿಧಾನಸಭೆಯಲ್ಲಿ ಪ್ರಮೋದ್ ಸಾವಂತ್ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಒಟ್ಟು 40 ಸಂಖ್ಯಾ ಬಲದ ಗೋವಾ ವಿಧಾನಸಭೆಯಲ್ಲಿ ಪ್ರಸ್ತುತ 36  ಸದಸ್ಯರಿದ್ದಾರೆ. ಹೀಗಾಗಿ ಹಾಲಿ ಪ್ರಮೋದ್ ಸಾವಂತ್ ಸರ್ಕಾರ ಬಹುಮತ ಸಾಬೀತಿಗೆ 14 ಶಾಸಕ ಅಗತ್ಯವಿದೆ. ಪ್ರಸ್ತುತ ಗೋವಾದಲ್ಲಿ ಬಿಜೆಪಿ 12 ಸದಸ್ಯ ಬಲವನ್ನು ಹೊಂದಿದ್ದು, ಬಿಜೆಪಿ ಮೈತ್ರಿ ಪಕ್ಷಗಳಾದ ಎಂಜಿಪಿ ಮತ್ತು ಜಿಎಫ್ ಪಿ ಮೂರು ಶಾಸಕರನ್ನು ಹೊಂದಿದೆ. ಆ ಮೂಲಕ ಬಿಜೆಪಿ ಮೈತ್ರಿಕೂಟ ಒಟ್ಟು 15 ಸ್ಥಾನಗಳನ್ನು ಹೊಂದುವ ಮೂಲಕ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ಬಿಜೆಪಿ ಲೆಕ್ಕಾಚಾರ. ಇದಲ್ಲದೆ ಮೂವರು ಪಕ್ಷೇತರ ಶಾಸಕರೂ ಕೂಡ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಇದೇ ಕಾರಣಕ್ಕೆ ನಾಳೆ ಗೋವಾದಲ್ಲಿ ವಿಶ್ವಾಸಮತ ಯಾಚನೆ ಮಾಡಲಾಗುತ್ತಿದೆ. 
ಅಂತೆಯೇ ಕಾಂಗ್ರೆಸ್ ಪಕ್ಷ ಕೂಡ 14 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ ಮಿತ್ರ ಪಕ್ಷ ಎನ್ ಸಿಪಿಯ ಓರ್ವ ಶಾಸಕ ಕೂಡ ಇದ್ದಾರೆ.  ಇನ್ನು ನಾಳಿನ ವಿಶ್ವಾಸ ಮತಯಾಚನೆಗೆ ಬಿಜೆಪಿ ಶಾಸಕ ಪಾಂಡುರಂಗ ಮಡ್ಕೈಕರ್ ಅವರು ಗೈರಾಗಲಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾಳಿನ ವಿಶ್ವಾಸ ಮತ ಯಾತನೆ ಕುತೂಹಲ ಕೆರಳಿಸಿದೆ.
SCROLL FOR NEXT