ನವದೆಹಲಿ: ಚೌಕಿದಾರ್ ಚೋರ್ ಹೈ ಎಂಬ ಹೇಳಿಕೆಗೆ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆ ಕೋರಿದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಚೌಕಿದಾರ್ ಚೋರ್ ಹೈ ಎಂಬ ಹೇಳಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನ್ಯಾಯಾಲಯದ ಮುಂದೆ ಕ್ಷಮೆ ಕೋರಿದ್ದೇನೆಯೇ ಹೊರತು ಪ್ರಧಾನಿ ಮುಂದೆ ಅಥವಾ ಬಿಜೆಪಿಗೆ ನಾನು ಕ್ಷಮೆ ಕೇಳಿದ್ದಲ್ಲ ಎಂದು ಸ್ಟಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಇದು ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದ ಹೆಸರನ್ನು ಘೋಷವಾಕ್ಯದಲ್ಲಿ ತಂದಿರುವುದಕ್ಕೆ ನಾನು ಕ್ಷಮೆ ಕೋರಿದ್ದೇನೆ. ಈ ವಿಚಾರದಲ್ಲಿ ಯಾವುದೇ ಹೇಳಿಕೆ ಅಸಮರ್ಥನೀಯವಾಗುತ್ತಿತ್ತು. ನಾನು ಮೋದಿಗೆ ಅಥವಾ ಬಿಜೆಪಿಗೆ ಕ್ಷಮೆ ಕೇಳಿದ್ದಲ್ಲ ಎಂದರು.
ಇಂದು ಚೋರ್ ಅಥವಾ ಕಳ್ಳ ಎಂಬ ಹೇಳಿಕೆ ದೇಶಾದ್ಯಂತ ಕೇಳಿಬರುತ್ತಿದೆ. ನಾನು ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ. ಕಾಂಗ್ರೆಸ್ ನ ಆ ಘೋಷವಾಕ್ಯವನ್ನು ಹಿಂತೆಗೆದುಕೊಳ್ಳುವುದಿಲ್ಲ. ಮುಂದುವರಿಸುತ್ತೇವೆ. ದೇಶದ ಯಾವ ಮೂಲೆಗೆ ಹೋಗಿ ನೀವು ಜನರನ್ನು ಕೇಳಿ ಚೌಕಿದಾರ್ ಎಂದರೆ ಕೂಡಲೇ ಚೋರ್ ಹೈ ಎಂಬ ಪ್ರತಿಕ್ರಿಯೆ ಜನರಿಂದ ಬರುತ್ತದೆ ಎಂದರು.
ರಫೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಆರೋಪ ಹೊತ್ತಿದ್ದ ರಾಹುಲ್ ಗಾಂಧಿ, ತಮ್ಮ ಹೇಳಿಕೆಗೆ ಸುಪ್ರೀಂಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದಾರೆ.ಚೌಕಿದಾರ್ ಚೋರ್ ಹೇ ಘೋಷಣೆಗೆ ಸುಪ್ರೀಂಕೋರ್ಟ್ ನ್ನು ತಳಕು ಹಾಕಿದ್ದಕ್ಕೆ ತಪ್ಪನ್ನು ಒಪ್ಪಿಕೊಳ್ಳುವಂತೆ ಸುಪ್ರೀಂಕೋರ್ಟ್ ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೋರಿದ್ದು, ಈ ಕುರಿತು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರಿಗೆ ಹೊಸ ಅಫಿಡವಿಟ್ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂಕೋರ್ಟ್ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos