ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆಗೆ ಬಿಜೆಪಿಯೇ ಕಾರಣ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಆರೋಪಿಸಿದ್ದಾರೆ.
ಬಿಜೆಪಿ ಬೆಂಬಲಿತ ವಿ ಪಿ ಸಿಂಗ್ ಸರ್ಕಾರ ರಾಜೀವ್ ಗಾಂಧಿಗೆ ಅಗತ್ಯವಿದ್ದ ಹೆಚ್ಚುವರಿ ಭದ್ರತೆಯನ್ನು ಕೊಡಲು ನಿರಾಕರಿಸಿತು. ರಾಜೀವ್ ಗಾಂಧಿ ಅವರ ಹತ್ಯೆಯಾಗಬಹುದೆಂಬ ಬಗ್ಗೆ ಗುಪ್ತಚರ ಮಾಹಿತಿ ಇದ್ದಾಗ್ಯೂ, ಪದೇ ಪದೇ ಹೆಚ್ಚುವರಿ ಭದ್ರತೆಗೆ ಕೋರಿಕೆ ಸಲ್ಲಿಸಿದ ಹೊರತಾಗಿಯೂ, ರಾಜೀವ್ ಗೆ ಕೇವಲ ಒಬ್ಬ ಪಿಎಸ್ಓ ನನ್ನು ಕೊಡಲಾಯಿತು ಎಂದು ಪಟೇಲ್ ದೂರಿದ್ದಾರೆ.
ಬಿಜೆಪಿಯ ದ್ವೇಷದ ಫಲವಾಗಿಯೇ ರಾಜೀವ್ ಜೀವ ಕಳೆದುಕೊಂಡರು. ಇವತ್ತು ಅವರು ತಮ್ಮ ವಿರುದ್ಧದ ಭ್ರಷ್ಟಾಚಾರಗಳ ನಿರಾಧಾರ ಆರೋಪಗಳಿಗೆ ಉತ್ತರಿಸಲು ನಮ್ಮೊಂದಿಗೆ ಇಲ್ಲ ಎಂದು ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಭ್ರಷ್ಟಾಚಾರಿ ನಂಬರ್ 1 ಆಗಿಯೇ ತಮ್ಮ ಜೀವಿನ ಮುಗಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಹೆಸರನ್ನು ಚುನಾವಣಾ ಪ್ರಚಾರದ ನಡುವೆ ಎಳೆದು ತಂದಿರುವುದು ದುರದೃಷ್ಟಕರ ಪಟೇಲ್ ಟ್ವೀಟ್ ಮಾಡಿದ್ದಾರೆ.