ದೇಶ

ಒಡಿಶಾ: ಫೋನಿ ಚಂಡಮಾರುತ, ಮೃತರ ಸಂಖ್ಯೆ 43ಕ್ಕೆ ಏರಿಕೆ

Nagaraja AB

ಒಡಿಶಾ: ಫೋನಿ ಚಂಡಮಾರುತದಿಂದ ಒಡಿಶಾ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಕಟಕ್ ಹಾಗೂ ಕುರ್ದಾ ಜಿಲ್ಲೆಗಳಲ್ಲಿ ಇಂದು ಕೂಡಾ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಂಡಮಾರುತದಿಂದಾಗಿ ಒಂದು ವಾರದಿಂದಲೂ ಒಡಿಶಾದ ಕರಾವಳಿ ಭಾಗದ ಪ್ರದೇಶಗಳಲ್ಲಿ ವಿದ್ಯುತ್ , ಕುಡಿಯುವ ನೀರಿನ ಕೊರತೆ  ಉಂಟಾಗಿದ್ದು, ಜನರು ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆಯಲ್ಲಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಮೂಲಸೌಕರ್ಯಗಳ ಕೊರತೆ ಸಮಸ್ಯೆ ಮುಂದಿಟ್ಟುಕೊಂಡು ಭುವನೇಶ್ವರ್ ಮತ್ತು ಪುರಿ ಹಾಗೂ ಪಾರದೀಪ್ ಮತ್ತು ಕಟಕ್ ಸಂಪರ್ಕಿಸುವ ರಸ್ತೆಗಳನ್ನು ತಡೆದು ಜನರು ಪ್ರತಿಭಟನೆ ನಡೆಸಿದರು. ಈ ಮಧ್ಯೆ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ರಾಜ್ಯಸರ್ಕಾರ ಭರವಸೆ ನೀಡಿದೆ.

ರಾಜಧಾನಿ ಭುವನೇಶ್ವರದಲ್ಲೂ ಕಳೆದ 8 ದಿನಗಳಿಂದಲೂ ಇದೇ ರೀತಿಯ ಪ್ರತಿಭಟನೆ ನಡೆಯುತ್ತಲೇ ಇದೆ. ಚಂಡಮಾರುತದಿಂದ ದೇಗುಲ ನಗರ ಪುರಿಯಲ್ಲಿ ತೀವ್ರ ತೊಂದರೆಯಾಗಿದೆ. ಮನೆಗಳನ್ನು ತೊರೆದಿರುವ ಸ್ಥಳೀಯ ನಿವಾಸಿಗಳು ಬೇರೆಡೆಗೆ ವಲಸೆ ಹೋಗಿದ್ದಾರೆ. ಆದಾಗ್ಯೂ, ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿರುವುದಾಗಿ ರಾಜ್ಯಸರ್ಕಾರ ಹೇಳುತ್ತಿದೆ.

ರಾಜ್ಯಸರ್ಕಾರದಿಂದ ಪರಿಹಾರ ಘೋಷಣೆಯಾಗಿದ್ದರೂ ನೆರವು ನೀಡದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬನ್ನನ್ನು ಆಕ್ರೋಸಗೊಂಡ ಜನರು ಹಲ್ಲೆ ನಡೆಸಿರುವ ಘಟನೆ ಜೈಪುರ ಜಿಲ್ಲೆಯ ಬಿಂಜಾರ್ ಪುರ್ ಪ್ರದೇಶದಲ್ಲಿ ನಡೆದಿದೆ. ಅಧಿಕಾರಿ  ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಕೆ ದಾಸ್ ಹೇಳಿದ್ದಾರೆ.

SCROLL FOR NEXT