ಬಾಲಾಕೋಟ್ ವೈಮಾನಿಕ ದಾಳಿ ನಂತರ ಭಾರತ-ಪಾಕಿಸ್ತಾನದ ನಡುವೆ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ಗಡಿಯಲ್ಲಿ ಸೆರೆ ಹಿಡಿದಿದ್ದ ಐಎಎಫ್ ಯೋಧ ಅಭಿನಂದನ್ ಗೆ ಸತತ 40 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದು ಈಗ ಬಹಿರಂಗಗೊಂಡಿದೆ.
ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದ ಕೆಲವೇ ಗಂಟೆಗಳಲ್ಲಿ, ಪಾಕ್ ಸೇನೆಯಿಂದ ಐಎಸ್ಐ (ಪಾಕ್ ಗುಪ್ತಚರ ಸಂಸ್ಥೆ) ಗೆ ಹಸ್ತಾಂತರಿಸಿ ಇಸ್ಲಾಮಾಬಾದ್ ನಿಂದ ರಾವಲ್ಪಿಂಡಿಗೆ ಕಳಿಸಲಾಯಿತು. ಎರಡು ದಿನಗಳ ಕಾಲ ತನಿಖಾ ಸೆಲ್ ನಲ್ಲಿ ಇರಿಸಲಾಗಿದ್ದ ಅಭಿನಂದನ್ ವರ್ಧಮಾನ್ ಗೆ ಐಎಸ್ ಐ 40 ಗಂಟೆಗಳ ವರೆಗೆ ಚಿತ್ರಹಿಂಸೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಈಗ ಬಹಿರಂಗಪಡಿಸಿದೆ.
ವಿಚಾರಣೆ ವೇಳೆ ಅಭಿನಂದನ್ ಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಅಭಿನಂದನ್ ಇದ್ದ ಕೊಠಡಿಯಲ್ಲಿ ಅತಿಯಾದ ಬೆಳಕು ಹಾಗೂ ಅತಿಯಾದ ಧ್ವನಿಯಲ್ಲಿ ಸಂಗೀತವನ್ನು ಹಾಕಿದ್ದರು. ಪ್ರತಿ ಅರ್ಧ ಗಂಟೆಗೆ ಬರುತ್ತಿದ್ದ ವ್ಯಕ್ತಿ ತನಗೆ ದೈಹಿಕ ಹಿಂಸೆ (ಹೊಡೆಯುವುದು) ನೀಡುತ್ತಿದ್ದ. ಎಂದು ವಿಂಗ್ ಕಮಾಂಡರ್ ಅಭಿನಂದನ್ ಇಲ್ಲಿನ ಅಧಿಕಾರಿಗಳೊಂದಿಗಿನ ವಿಚಾರಣೆಯ ವೇಳೆ ಹೇಳಿದ್ದಾರೆ.
ಐಎಸ್ ಐ ವಶಕ್ಕೆ ನೀಡಿ ರಾವಲ್ಪಿಂಡಿಗೆ ಹೋಗುವುದಕ್ಕೂ ಮುನ್ನ ಪಾಕಿಸ್ತಾನ ಸೇನೆ ತಮ್ಮನ್ನು ಚೆನ್ನಾಗಿ ನೋಡಿಕೊಂಡಿತ್ತು. ಸೇನಾ ಮೆಸ್ ನಲ್ಲಿ ಚಹಾ ನೀಡಿದ್ದರು. ತಾವು ಚಹಾ ಕುಡಿಯುತ್ತಿರುವ ವಿಡಿಯೋವನ್ನು ಮೆಸ್ ನಲ್ಲಿ ತೆಗೆಯಲಾಗಿತ್ತು. ಆದರೆ ಪಾಕಿಸ್ತಾನ ಸೇನೆಯನ್ನು ಹೊಗಳಿರುವ ಎರಡನೇ ವಿಡಿಯೋ ನಕಲಿಯದ್ದು ಎಂದು ಸ್ವತಃ ಅಭಿನಂದನ್ ಹೇಳಿದ್ದಾರೆ.
ಪಾಕಿಸ್ತಾನದ ಸೇನೆಯನ್ನು ಹೊಗಳಿರುವ ತನ್ನ ವಿಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ, ನನ್ನ ಧ್ವನಿಯ ಜೊತೆಗೆ ಅಲ್ಲಿರುವ ಧ್ವನಿಯನ್ನು ಹೋಲಿಕೆ ಮಾಡಿ ನೋಡಬಹುದು ಎಂದು ಅಭಿನಂದನ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos