ಡೆಹ್ರಾಡೂನ್: ಮತ ಬ್ಯಾಂಕ್ ರಾಜಕಾರಣದಿಂದಾಗಿ ಭಯದ ವಾತಾವರಣದಲ್ಲಿ ಬದುಕುತ್ತಿರುವ ದೇಶದ ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ ಬೆನ್ನಲ್ಲೇ ಇಲ್ಲಿನ ರಾಜ್ಯ ಬಿಜೆಪಿ ಕಚೇರಿಯ ಗ್ರಂಥಾಲಯದಲ್ಲಿ “ಪವಿತ್ರ ಕುರಾನ್”ನ ಪ್ರತಿಯೊಂದನ್ನು ಪಕ್ಷದ ಕಾರ್ಯಕರ್ತರಿಗೆ ನೆರವಾಗಲೆಂದು ಇರಿಸಲಾಗಿದೆ.
ಪ್ರತಿಯೊಂದು ಧರ್ಮವನ್ನೂ ಸಮಾನತೆಯಿಂದ ಕಾಣುವ ಪಕ್ಷದ ತತ್ವದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಮುಖ್ಯಸ್ಥ ದೇವೇಂದ್ರ ಭಾಸಿನ್ ಹೇಳಿದ್ದಾರೆ.
ಪಕ್ಷದ ರಾಜ್ಯ ಘಟಕ ಕೇಂದ್ರ ಕಚೇರಿಯ ಗ್ರಂಥಾಲಯದಲ್ಲಿ ಎರಡು ದಿನಗಳ ಹಿಂದೆ ಕುರಾನ್ ಪ್ರತಿಯನ್ನು ಇರಿಸಲಾಗಿದೆ.
ಎಲ್ಲಾ ಧರ್ಮಗಳ ಪವಿತ್ರ ಕೃತಿಗಳು ತನ್ನ ಕಾರ್ಯಕರ್ತರಿಗೆ ಲಭ್ಯವಾಗಬೇಕು ಎಂದು ಪಕ್ಷ ಬಯಸಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಆರಂಭಿಸಲಾಗಿರುವ ಗ್ರಂಥಾಲಯದಲ್ಲಿ ಸುಮಾರು 400 ಪುಸ್ತಕಗಳಿವೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ದಿಗ್ವಿಜಯ ಸಾಧಿಸಿದ ನಂತರ ತಮ್ಮ ಮೊದಲ ಬಾಷಣದಲ್ಲಿ ಪ್ರಧಾನಿ ಮೋದಿ, ಮತಬ್ಯಾಂಕ್ ರಾಜಕಾರಣದಿಂದ ಅಲ್ಪಸಂಖ್ಯಾತ ಮುಸ್ಲಿಮರು ನಲುಗಿದ್ದು, ಭಯದ ವಾತಾವರಣದಲ್ಲಿರುವ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos