ದೇಶ

ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ: ಸತ್ಯಪಾಲ್ ಮಲಿಕ್

Raghavendra Adiga

ಪಣಜಿ: ತಾನು ಈ ಹಿಂದೆ ಬಹಳವೇ ವಿವಾದಾತ್ಮಕವೂ, ಸಮಸ್ಯೆಗಳಿಂದ ಕೂಡಿದ ಸ್ಥಳವೊಂದರ ರಾಜ್ಯಪಾಲನಾಗಿಯೂ ಸಹ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಗೋವಾದ ನೂತನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಭಾನುವಾರ ಸತ್ಯಪಾಲ್ ಮಲಿಕ್ ಗೋವಾ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಹಿಂದೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರಿಗೆ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಪ್ರದೀಪ್ ನಂದ್ರಾಜೋಗ್ ಗೋವಾದ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದ್ದಾರೆ.

"ಜಮ್ಮು ಮತ್ತು ಕಾಶ್ಮೀರ ಬಹಳ ಸಮಸ್ಯಾತ್ಮಕ ಸ್ಥಳವಾಗಿದೆ ಎನ್ನಲಾಗುತ್ತದೆ. ಆದರೆ ನಾನು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಮತ್ತು ಎಲ್ಲಾ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದೇನೆ" ಎಂದು ಮಲಿಕ್ ಹೇಳಿದರು.

"ಈಗ ನಾನು ಶಾಂತಿಯುತ ಪ್ರದೇಶಕ್ಕೆ ಬಂದಿದ್ದೇನೆ.ರಾಜ್ಯ ಪ್ರಗತಿಪಥದಲ್ಲಿದೆ. ಇಲ್ಲಿ ನಾಯಕತ್ವದ ವಿವಾದಗಳಿಲ್ಲ.ಜನರು ಸಹ ಬಹಳ ಒಳ್ಳೆಯವರಾದ ಕಾರಣ ನನಗೆ ಇಲ್ಲಿ ಶಾಂತಿಯುತ ಮತ್ತು ಒಳ್ಳೆಯ ಸಮಯ ಸಿಗುತ್ತದೆ" 

ಅಕ್ಟೋಬರ್ 25 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಲಿಕ್ ಅವರನ್ನು ಗೋವಾ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶಿಸಿದ್ದರು.ಗೋವಾದ ಈ ಹಿಂದಿನ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರ ಅಧಿಕಾರಾವಧಿ ಈ ವರ್ಷ ಪೂರ್ಣವಾಗಿದೆ.ಮಲಿಕ್ ಈ ಹಿಂದೆ ರಾಜ್ಯಪಾಲರಾಗಿದ್ದ ಜಮ್ಮು ಕಾಶ್ಮೀರವನ್ನು ಕೇಂದ್ರ ಸರ್ಕಾರ ವಿಭಜಿಸಿ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಗಳಿಗೆ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ಗಳನ್ನು ನೇಮಿಸಿದೆ.

SCROLL FOR NEXT