ದೇಶ

ಕರ್ತಾರ್ ಪುರ್ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿದೆ-ರವೀಶ್ ಕುಮಾರ್ 

Nagaraja AB

ನವದೆಹಲಿ: ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ  ಪಾಕಿಸ್ತಾನದಲ್ಲಿರುವ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನೆಗೆ ಎರಡು ದಿನಗಳು ಬಾಕಿ ಇರುವಂತೆಯೇ ದಾರ್ಬರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಲಿರುವ ಭಾರತದ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಕೆಲ ಸಂದರ್ಭಗಳಲ್ಲಿ ಪಾಸ್ ಪೋರ್ಟ್ ಬೇಕು, ಮತ್ತೆ ಕೆಲ ಸಂದರ್ಭಗಳಲ್ಲಿ ಪಾಸ್ ಪೋರ್ಟ್ ಬೇಡ ಅಂತಹ ಅಸ್ಪಷ್ಟ ವರದಿಗಳು ಪಾಕಿಸ್ತಾನದಿಂದ ಬಂದಿವೆ. ಇದೀಗ ಉಭಯ ದೇಶಗಳ ನಡುವಣ ಒಪ್ಪಂದದ ಅನ್ವಯ ಸೂಕ್ತ ದಾಖಲಾತಿಗಳು ಬೇಕಾಗುತ್ತವೆ. ಪಾಸ್ ಪೋರ್ಟ್ ಅಗತ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿರುವುದಿಲ್ಲ ಎಂದು ನವೆಂಬರ್ 1ರಂದು ಟ್ವೀಟ್ ಮಾಡಿದ್ದರು. ಆದರೆ, ಒಪ್ಪಂದದ ಪ್ರಕಾರ ಪಾಸ್ ಪೋರ್ಟ್ ಅಗತ್ಯವಾಗಿದೆ. ಕರ್ತಾರ್ ಪುರ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಭಾರತದ ಗಣ್ಯರ ಹೆಸರನ್ನು ಪಾಕಿಸ್ತಾನ ಇನ್ನೂ ಅಂತಿಮಗೊಳಿಸಿಲ್ಲ. ನಾವು ಎಲ್ಲರ ಹೆಸರನ್ನು ತಿಳಿಸಿದ್ದೇವೆ. ಭಾರತದ ಗಣ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅವರು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

SCROLL FOR NEXT