ದೇಶ

ಕಾರಿಡಾರ್‌ನಿಂದ ಭಾರತ- ಪಾಕ್ ಸಂಬಂಧ ಮತ್ತಷ್ಟು ಗಟ್ಟಿ: ಮನಮೋಹನ್ ಸಿಂಗ್

Srinivasamurthy VN

ಕರ್ತಾರ್‌ಪುರ: ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನೆಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ಇದು ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಒಂದು ಮರೆಯಾಗದ ಕ್ಷಣವಾಗಿದೆ. ಮತ್ತು ಇದರಿಂದ ಎರಡೂ ದೇಶಗಳಿಗೆ ಒಳ್ಳೆಯದಾಗಲಿದೆ ಮತ್ತು ನಮ್ಮ ನಡುವಣ ಸಂಬಂಧಗಳು ಗಮನಾರ್ಹವಾಗಿ ಸುಧಾರಿಸಲು ಸಹ ಅವಕಾಶ ಮಾಡಿಕೊಡಲಿದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಇದು ಉಭಯ ದೇಶಗಳ ನಡುವೆ ಜನರ ನಂಬಿಕೆ ಬೆಸೆಯಲು ಮತ್ತು ಉತ್ತಮ ಸಂಬಂಧಕ್ಕೂ ಇದು ದಾರಿಮಾಡಿಕೊಡಲಿದೆ. ಹೀಗಾಗಿ ಅತ್ಯಂತ ಸಂತೋಷದಾಯಕ ದಿನ" ಎಂದು ಸಿಂಗ್ ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ಪಟ್ಟಣವಾದ ನರೋವಾಲ್‌ನಲ್ಲಿರುವ ಸಿಖ್ ಧರ್ಮದ ಪವಿತ್ರ ದೇವಾಲಯಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್ ಅನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಿದ್ದಾರೆ. ಈ ಕಾರಿಡಾರ್ ಭಾರತದ ಗುರುದಾಸ್‌ಪುರದ ಡೇರಾ ಬಾಬಾ ನಾನಕ್ ಮತ್ತು ಪಾಕಿಸ್ತಾನದ ಗುರುದ್ವಾರ ಕರ್ತಾರ್‌ಪುರ್ ಸಾಹಿಬ್‌ಗೆ ಸಂಪರ್ಕಿಸಲಿದೆ.

ಪಂಜಾಬ್‌ನಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸಲು ಕಾರಿಡಾರ್ ಅನ್ನು ಬಳಸಬಹುದೆಂಬ ಆತಂಕ ವ್ಯಕ್ತಪಡಿಸಿವವರಿಗೆ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಬಗ್ಗೆ ನಂಬಿಕೆ ಇಲ್ಲ ಎಂದು ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ. ಕರ್ತಾರ್‌ಪುರ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಇಡೀ ಸಿಖ್ ಸಮುದಾಯವು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಚಿರರುಣಿಯಾಗಿದೆ ಎಂದು ಹರ್ಸಿಮ್ರತ್ ಹೇಳಿದ್ದು ಗುರುನಾನಕ್ ಅವರ ಕೃಪೆಯಿಂದ ಉಭಯ ದೇಶಗಳ ನಡುವೆ ಉತ್ತಮ ಸಂಬಂಧ ಮತ್ತಷ್ಟು ಉತ್ತಮವಾಗಲಿದೆ ಎಂದರು.

SCROLL FOR NEXT