ದೇಶ

'ಮಹಾ' ರಾಜಕೀಯ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೈ, ಎನ್ ಸಿಪಿ, ಶಿವಸೇನಾ ನಾಯಕರ ಸರಣಿ ಮಾತುಕತೆ

Nagaraja AB

ಮುಂಬೈ: ದಿನಕ್ಕೊಂದು ರೀತಿಯ ಪ್ರಹಸನಕ್ಕೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರ ರಾಜಕೀಯದಲ್ಲಿ ಸರ್ಕಾರ ರಚನೆಯ ಕಸರತ್ತು ಮುಂದುವರೆದಿದ್ದು, ಮುಖ್ಯಮಂತ್ರಿ ಸ್ಥಾನ ಕುರಿತಂತೆ ಕಾಂಗ್ರೆಸ್ , ಎನ್ ಸಿಪಿ ಹಾಗೂ ಶಿವಸೇನಾ ನಾಯಕರಿಂದ ಸರಣಿ ಮಾತುಕತೆ ನಡೆಯುತ್ತಿದೆ. 

ಮುಖ್ಯಮಂತ್ರಿ ಸ್ಥಾನ ಅಂತಿಮಗೊಳಿಸುವ ಮುನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡನ್ನು ಮೂರು ಪಕ್ಷಗಳ ಉನ್ನತ ನಾಯಕರು ಅನುಮೋದಿಸಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಈ ಮೂರು ಪಕ್ಷಗಳ ನಾಯಕರು ಸರ್ಕಾರ ರಚನೆ ಕುರಿತಂತೆ ಸರಣಿ ಸಭೆಗಳನನು ನಡೆಸುತ್ತಿದ್ದಾರೆ. ಇಂದು ಸಹ ಮಾತುಕತೆ ನಡೆದಿರುವ ಬಗ್ಗೆ ತಿಳಿದುಬಂದಿದೆ. 

ಕಾಂಗ್ರೆಸ್ ಹಾಗೂ ಎನ್ ಸಿಪಿ ಮಧ್ಯೆ ರಹಸ್ಯ ಮಾತುಕತೆ ನಡೆಯುತ್ತಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ  ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರೊಂದಿಗೆ ಉದ್ದವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ ಎಂಬಂತಹ ವದಂತಿಗಳನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ತಳ್ಳಿಹಾಕಿದ್ದಾರೆ.

ಅಹ್ಮದ್ ಪಟೇಲ್  ಜೊತೆಗೆ ಉದ್ದವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರೊಂದಿಗಿನ ಮಾತುಕತೆ ಪ್ರಗತಿಯಲ್ಲಿದೆ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹ್ಹಾಣ್, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತ ಮಾತುಕತೆ ಪ್ರಾಥಮಿಕ ಹಂತದಲ್ಲಿದ್ದು, ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.

ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಸುಭದ್ರ ಸರ್ಕಾರ ರಚನೆ ಸಾಧ್ಯವಿಲ್ಲ ಎಂಬ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಯ ವರದಿ ಅನುಸಾರ ಮಂಗಳವಾರದಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ.

SCROLL FOR NEXT