ದೇಶ

ಮಹಾತ್ಮ ಗಾಂಧಿ ಸಾವು ಆಕಸ್ಮಿಕ!: ವಿವಾದಕ್ಕೆ ಕಾರಣವಾಯ್ತು ಒಡಿಶಾ ಶಾಲಾ ಕೈಪಿಡಿ

Lingaraj Badiger

ಭುವನೇಶ್ವರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಮೃತಪಟ್ಟಿದ್ದು ಹೇಗೆ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ, ಒಡಿಶಾದ ಶಾಲಾ ಕೈಪಿಡಿಯಲ್ಲಿ ಗಾಂಧಿ ಸಾವು ಆಕಸ್ಮಿಕ ಎಂದು ಹೇಳಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಮಹಾ ಪ್ರಮಾದಕ್ಕೆ ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ರಾಜಕೀಯ ನಾಯಕರು ಮತ್ತು ಹೋರಾಟಗಾರರು ಆಗ್ರಹಿಸಿದ್ದಾರೆ.

ಕಳೆದ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯ 150ನೇ ಜಯಂತಿಯ ಅಂಗವಾಗಿ ಒಡಿಶಾ ಸರ್ಕಾರ ಸಿದ್ಧಪಡಿಸಿದ ಎರಡು ಪುಟಗಳ ಶಾಲಾ ಕೈಪಿಡಿಯಲ್ಲಿ ಗಾಂಧಿ ಸಾವು ಅನಿರೀಕ್ಷಿತ ಕಾರಣಗಳಿಂದ ಸಂಭವಿಸಿದೆ ಎಂದು ಪ್ರಕಟಿಸಲಾಗಿದೆ.

ಕೂಡಲೇ ಎಚ್ಚೆತ್ತುಕೊಂಡ ನವೀನ್‌ ಪಾಟ್ನಾಯಕ್ ಅವರು ಈ ಕುರಿತು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ. ಆದರೂ ಗಾಂಧಿ ಕುರಿತು ಇಂತಹ ಗೊಂದಲ ಮೂಡಿಸುವ ಮಾಹಿತಿ ಪ್ರಕಟಿಸಿರುವುದು ಹಲವರ ಕೋಪಕ್ಕೆ ಕಾರಣವಾಗಿದೆ.

'ನಮ್ಮ ಬಾಪೂಜಿ: ಮಿನುಗು ನೋಟ' ಎಂಬ ಹೆಸರಿನಲ್ಲಿ ಪ್ರಕಟವಾದ ಈ ಕೈಪಿಡಿಯನ್ನು ಒಡಿಶಾ ರಾಜ್ಯದ 'ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆ ಸಿದ್ದಪಡಿಸಿದೆ. 1948ರ ಜನವರಿ 30 ರಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಉಂಟಾದ ಅನಿರೀಕ್ಷಿತ ಕಾರಣಗಳಿಂದ ಗಾಂಧಿ ಸಾವಿಗೀಡಾದರು ಎಂದು ಈ ಕೈಪಿಡಿಯಲ್ಲಿ ಹೇಳಲಾಗಿದೆ.

ಈ ಕೈಪಿಡಿಯಲ್ಲಿ ಗಾಂಧಿ ಅವರ ಸಂದೇಶಗಳು, ಗಾಂಧಿ ಮತ್ತು ಒಡಿಶಾ ನಡುವಿನ ಸಂಬಂಧಗಳ ಬಗ್ಗೆಯೂ ತಿಳಿಸಲಾಗಿದೆ. ಕಳೆದ ಅಕ್ಟೋಬರ್‌ 2ರ 150ನೇ ಗಾಂಧಿ ಜಯಂತಿಯಂದು ಒಡಿಶಾದ ಎಲ್ಲ ಸರಕಾರಿ ಶಾಲೆಗಳಿಗೆ ಈ ಕೈಪಿಡಿಯನ್ನು ವಿತರಿಸಲಾಗಿತ್ತು.

SCROLL FOR NEXT