ದೇಶ

ಶಬರಿಮಲೆ ದರ್ಶನಕ್ಕೆ ಮುಕ್ತ: ಕೇರಳ ಪೊಲೀಸರಿಂದ ಬಿಗಿ ಭದ್ರತೆ 

Sumana Upadhyaya

ತಿರುವನಂತಪುರಂ: ಎರಡು ತಿಂಗಳ ಶಬರಿಮಲೆ ಮಂಡಲ ಪೂಜೆ ನಾಳೆಯಿಂದ ಆರಂಭವಾಗಲಿದ್ದು ರಾಜ್ಯ ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ಘೋಷಿಸಿದೆ.


ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತೀರ್ಪು ನೀಡಿದ್ದ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಕಳೆದ ವರ್ಷ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಈ ವರ್ಷ ಅಷ್ಟೊಂದು ಪೊಲೀಸರನ್ನು ನಿಯೋಜನೆ ಮಾಡದಿದ್ದರೂ ಕೂಡ ನಿಲಕ್ಕಲ್, ಪಂಪಾ ಮತ್ತು ಸನ್ನಿಧಾನಗಳಲ್ಲಿ ಮೂವರು ಎಸ್ಪಿಗಳನ್ನು ನಿಯೋಜಿಸಲಾಗಿದೆ.


ಈ ವರ್ಷ ಆನ್ ಲೈನ್ ನಲ್ಲಿ 36 ಮಹಿಳೆಯರು ಪ್ರವೇಶಿಸಲು ಬುಕ್ಕಿಂಗ್ ಮಾಡಿಕೊಂಡಿದ್ದು ಅವರು ಅಯ್ಯಪ್ಪ ದೇವಾಲಯಕ್ಕೆ ಹೋಗುತ್ತಾರೆಯೇ ಎಂದು ಪೊಲೀಸರು ನಿಗಾವಹಿಸಲಿದ್ದಾರೆ. 


ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಮಾತನಾಡಿ, ಪಂಪದಿಂದ ಆಚೆ ಶಬರಿಮಲೆ ಬೆಟ್ಟಕ್ಕೆ ಮಹಿಳೆಯರು ಪ್ರವೇಶಿಸುತ್ತಾರೆಯೇ ಎಂದು ಪೊಲೀಸರು ಗಮನಿಸಲಿದ್ದಾರೆ. ಈ ವರ್ಷ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸರು ಆದ್ಯತೆ ನೀಡಲಿದ್ದಾರೆ. ಈ ವರ್ಷ ನಿರ್ಬಂಧವಿದ್ದರೂ ಕೂಡ ಕಳೆದ ವರ್ಷದಷ್ಟು ಪೊಲೀಸರನ್ನು ನಿಯೋಜಿಸುವುದಿಲ್ಲ. ಭದ್ರತಾ ವ್ಯವಸ್ಥೆಗೆ ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ನೆರವನ್ನು ಸಹ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.


ಈ ವರ್ಷ ಮಂಡಲಜ್ಯೋತಿ ಸಮಯದಲ್ಲಿ ಶಬರಿಮಲೆ ಸುತ್ತಮುತ್ತ 10 ಸಾವಿರಕ್ಕೂ ಅಧಿಕ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. 

SCROLL FOR NEXT