ದೇಶ

ಕಾಂಗ್ರೆಸ್, ಎನ್ ಸಿಪಿ ಜೊತೆಗೆ ಉದ್ದವ್ ಕೈ ಜೋಡಣೆ: ಶಿವಸೇನಾ ಶಾಸಕರಲ್ಲಿ ಅಸಮಾಧಾನ-ಇನ್ ಸೈಡರ್ಸ್

Nagaraja AB

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಡ್ರಾಮ ಮುಂದುವರೆದಿರುವಂತೆ ಕಾಂಗ್ರೆಸ್ , ಎನ್ ಸಿಪಿ ಜೊತೆಗೆ ಕೈ ಜೋಡಿಸುವ ನಿರ್ಧಾರವನ್ನು ಉದ್ದವ್ ಠಾಕ್ರೆ ಘೋಷಿಸಿದಾಗ ಶಿವಸೇನೆಯಲ್ಲಿನ ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಆ ಪಕ್ಷದವರೇ ಹೇಳಿದ್ದಾರೆ.

ಈ ರೀತಿಯ ಭಾರಿ ಅಸಮಾಧಾನದಿಂದಾಗಿ ಶಾಸಕರು ತಮ್ಮ ಮನೆಗಳಿಗೆ ಮರಳಲು ಅನುಮತಿ ನೀಡಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. 

ಮಹಾರಾಷ್ಟ್ರ ಸರ್ಕಾರ ರಚಿಸಲು ರಾಜ್ಯಪಾಲರ ಆಹ್ವಾನವನ್ನು ಬಿಜೆಪಿ ನಿರಾಕರಿಸಿದ ನಂತರ ಶಿವಸೇನೆಯ ಎಲ್ಲಾ ಶಾಸಕರನ್ನು ಹೋಟೆಲ್ ವೊಂದಕ್ಕೆ ರವಾನಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್, ಎನ್ ಸಿಪಿ ಜೊತೆ ಸೇರಿ ಸರ್ಕಾರ ರಚಿಸುವ ಪಕ್ಷದ ಮುಖಂಡರ ವಿರುದ್ಧ ನಾಯಕರು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ್ದರು. 

ಆರಂಭದಲ್ಲಿ ಈ ಭಿನ್ನಾಭಿಪ್ರಾಯ ಸಣ್ಣ ಪ್ರಮಾಣದಲ್ಲಿತ್ತು ಆದರೆ, ದಿನಗಳು ಕಳೆದಂತೆ ಹೆಚ್ಚಾಗುತ್ತಾ ಸಾಗಿದ್ದ ಕಾರಣ ಶಾಸಕರನ್ನು ತಮ್ಮ ಮನೆಗಳಿಗೆ ಕಳುಹಿಸಲು ಪಕ್ಷದ ನಾಯಕರು ತೀರ್ಮಾನಿಸಿದರು ಎಂದು ಶಿವಸೇನೆಯೊಳಗಿನ ಮುಖಂಡರು ಹೇಳಿದ್ದಾರೆ. 

ಕಳೆದ ವರ್ಷ ಹೋಟೆಲ್ ನಲ್ಲಿ ಶಾಸಕರ ನಡುವೆ ವಾಕ್ಸಮರ, ದೈಹಿಕ ಹಲ್ಲೆಯಂತಹ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಹಲ್ಲೆಯ ಕಾರಣ ಆದಿತ್ಯ ಠಾಕ್ರೆ  ಮಧ್ಯರಾತ್ರಿಯಲ್ಲಿ ಹೋಟೆಲ್ ಗೆ ತೆರಳಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಕುದುರೆ ವ್ಯಾಪಾರ ಭೀತಿಯ  ಹಿನ್ನೆಲೆಯಲ್ಲಿ 56 ಶಿವಸೇನೆ ಶಾಸಕರು ಪಶ್ಟಿಮ ಮುಂಬೈಯ ರಿಟ್ರೀಟ್ ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಪೈಕಿ 40ಕ್ಕೂ ಹೆಚ್ಚು ಶಾಸಕರು ಬಂಡಾಯ ಏಳುವ ಸ್ಥಿತಿಯಲ್ಲಿದ್ದು, ವಿರೋಧಿಗಳೊಂದಿಗೆ ಹೇಗೆ ಕೈಜೋಡಿಸುವುದು ಎಂದು ವರಿಷ್ಠಿರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಶಿವಸೇನೆಯೊಂದಿಗೆ ಕೈ ಜೋಡಿಸಲು ಕಾಂಗ್ರೆಸ್ , ಎನ್ ಸಿಪಿ ನಿರ್ಧರಿಸಿಲ್ಲ ಉದ್ದವ್ ಠಾಕ್ರೆ ನೇತೃತ್ವದಲ್ಲಿನ ಶಿವಸೇನೆಯ ಆಂತರಿಕ ಕಚ್ಚಾಟ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

SCROLL FOR NEXT