ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ನೂತನ ಮೈತ್ರಿ ಸರ್ಕಾರ ರಚಿಸಲಾಗುವುದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಶುಕ್ರವಾರ ಹೇಳಿದ್ದಾರೆ.
ನೂತನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನಾ ನಾಯಕರು ಮ್ಯಾರಥಾನ್ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ಉದ್ಧವ್ ಠಾಕ್ರೆ ನಾಯಕತ್ವದ ಬಗ್ಗೆ ಒಮ್ಮತ ಇದೆ ಎಂದರು.
ಮೂರು ಪಕ್ಷಗಳ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಠಾತ್ರೆ ನಾಯಕತ್ವದ ಬಗ್ಗೆ ಒಮ್ಮತ ಇದೆ. ಈ ಕುರಿತು ನಾಳೆಯೂ ಮತ್ತಷ್ಟು ಮಾತುಕತೆ ನಡೆಯಲಿದೆ ಮತ್ತು ರಾಜ್ಯಪಾಲರನ್ನು ಯಾವಾಗ ಭೇಟಿ ಮಾಡಬೇಕು ಎಂಬುದರ ಬಗ್ಗೆಯೂ ನಾಳೆ ನಿರ್ಧರಿಸಲಾಗುವುದು ಎಂದರು. ಅಲ್ಲದೆ ನಾಳೆ ಮೂರು ಪಕ್ಷಗಳು ಸೇರಿ ಪತ್ರಿಕಾಗೋಷ್ಠಿ ನಡೆಸಲಿವೆ ಎಂದು ಶರದ್ ಯಾದವ್ ತಿಳಿಸಿದ್ದಾರೆ.
ಮಹರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಮತ್ತು ಎನ್ ಸಿಪಿ ಸಭೆಯಲ್ಲಿ ಶಿವಾಸೇನಾ ಜತೆ ಸೇರಿ ಸರ್ಕಾರ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.