ದೇಶ

ಚರ್ಚ್ ಗೆ ಹೊರಟವರು ಮಸಣಕ್ಕೆ: ಖಾಸಗಿ ಬಸ್ ಆಟೋಗೆ ಡಿಕ್ಕಿ, ಒಂದೇ ಕುಟುಂಬದ ನಾಲ್ವರು ದುರ್ಮರಣ

Nagaraja AB

ಕೊಚ್ಚಿ:ಖಾಸಗಿ ಬಸ್ ವೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ಘಟನೆ ಇಂದು ಬೆಳಗ್ಗೆ ಕೊಚ್ಚಿಯ ಉತ್ತರ ಭಾಗದಲ್ಲಿ ನಡೆದಿದೆ.

ಘಟನೆಯಲ್ಲಿ ಆಟೋ ರಿಕ್ಷಾದ ಚಾಲಕ, ಆತನ ಇಬ್ಬರು ಸಹೋದರಿಯರು ಹಾಗೂ ಅವರ ಅತ್ತೆ ಮೃತಪಟ್ಟಿದ್ದಾರೆ.  ಮೃತರನ್ನು ಮೇರಿ ಮಥೈ (60) ರೊಸೈ ಥಾಮಸ್ (55) ಮೇರಿ ಜಾರ್ಜ್  ಹಾಗೂ ಚಾಲಕ ಜೋಸೆಫ್  ಮಂಗತ್ತುಕರಾ (58 ) ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಅಂಗಮಲೈ ಬ್ಯಾಂಕ್ ಜಂಕ್ಷನ್ ನಲ್ಲಿ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಈ ಅಪಘಾತವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾನುವಾರದ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸೆಂಟ್. ಜಾರ್ಜ್ ಕ್ಯಾಥೊಲಿಕ್ ಬೆಸಿಲಿಕಾ ಚರ್ಚ್ ಗೆ ಕುಟುಂಬ ಸದಸ್ಯರು ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. 

ವೇಗವಾಗಿ ಬಂದ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ನೊಳಗೆ ಸಿಲುಕಿತ್ತು. ಗಾಯಾಗಳುಗಳನ್ನು ಆಟೋದಿಂದ ಎತ್ತುವುದೇ ಕಷ್ಟಕರವಾಗಿ ಪರಿಣಮಿಸಿತ್ತು. ರಕ್ಷಣಾ ಅಧಿಕಾರಿಗಳು ಕ್ರೇನ್ ಸಹಾಯದಿಂದ ಮೃತದೇಹಗಳನ್ನು ಹೊರಗೆ ತಂದಿದ್ದಾರೆಯ ಎಲ್ಲಾ ನತದೃಷ್ಟರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಅಂಗಮಲೈ ಪೊಲೀಸ್ ಠಾಣೆಯ  ಅಧಿಕಾರಿಗಳು ತಿಳಿಸಿದ್ದಾರೆ. 

ಆದಾಗ್ಯೂ, ಬಸ್ ಡ್ರೈವರ್ ನನ್ನು ಇನ್ನೂ ಬಂಧಿಸಿಲ್ಲ. ಅಪಘಾತವಾಗುತ್ತಿದ್ದಂತೆ ಬಸ್ ನಿಂದ ಜಿಗಿದು ಆತ ಪರಾರಿಯಾಗಿದ್ದಾನೆ. ಬಸ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಸ್ ಚಾಲಕನ ಹುಡುಕಾಟ ಮುಂದುವರೆದಿದೆ. ಐಪಿಸಿ ಸೆಕ್ಷನ್ 304ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಗಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪರೀಕ್ಷೆ ನಂತರ ಅವುಗಳನ್ನು ಆವರ ಸಂಬಂಧಿಕರು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ

SCROLL FOR NEXT