ಮುಂಬೈ: ನೂತನ ಮಹಾರಾಷ್ಟ್ರ ಕ್ಯಾಬಿನೇಟ್ ನಲ್ಲಿ ಶಿವಸೇನೆ ಮುಖ್ಯಮಂತ್ರಿ ಜೊತೆಗೆ 15 ಸಚಿವ ಸ್ಥಾನಗಳನ್ನು ಪಡೆಯಲಿದೆ. ಎನ್ ಸಿಪಿಗೆ ಉಪ ಮುಖ್ಯಮಂತ್ರಿ ಹಾಗೂ 13 ಸಚಿವ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸ್ಪೀಕರ್ ಹಾಗೂ 13 ಸಚಿವ ಸ್ಥಾನಗಳು ದೊರೆಯಲಿವೆ ಎಂಬಂತಹ ಮಾಹಿತಿಗಳು ಲಭ್ಯವಾಗುತ್ತಿವೆ.
ಉದ್ದವ್ ಠಾಕ್ರೆ ನೇತೃತ್ವದಲ್ಲಿನ ನೂತನ ಸರ್ಕಾರ ರಚನೆಗೆ ಎನ್ ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ನಾಯಕರು ಮಾತುಕತೆ ನಡೆಸುತ್ತಿರುವ ಬೆನ್ನಲ್ಲೇ ಈ ರೀತಿಯ ಮಾಹಿತಿ ದೊರಕಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ನೂತನ ಸರ್ಕಾರದಲ್ಲಿ ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ನಡುವಿನ ಅಧಿಕಾರ ಹಂಚಿಕೆಯನ್ನು ಕೆಲ ದಿನಗಳಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಬಾಳಾ ಸಾಹೇಬ್ ಥೋರಟ್ ಇಂದು ಬೆಳಗ್ಗೆ ಹೇಳಿದ್ದರು.
ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಪತನದ ನಂತರ ಶಿವಸೇನಾ, ಕಾಂಗ್ರೆಸ್ , ಎನ್ ಸಿಪಿ ಮತ್ತಿತರ ಪಕ್ಷಗಳು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡದ್ದು, ನಾಳೆ ಸಂಜೆ 6-40ಕ್ಕೆ ಶಿವಾಜಿ ಪಾರ್ಕ್ ನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೆಲ ದಿನಗಳ ಅನಿಶ್ಚಿತತೆ ನಂತರ ವಿಧಾನಸಭೆಯ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಹಂಗಾಮಿ ಸ್ಪೀಕರ್ ಕಾಳಿದಾಸ ಕೊಲಂಬ್ಕರ್ ಸಮ್ಮುಖದಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.