ದೇಶ

ಡ್ರೋಣ್ ಮೂಲಕ ಪಾಕ್ ಶಸ್ತ್ರಾಸ್ತ್ರ ರವಾನೆ: ಪ್ರಕರಣ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ

Manjula VN

ನವದೆಹಲಿ: ಪಂಜಾಬ್ ರಾಜ್ಯದ ವಿವಿಧೆಡೆ ಪಾಕಿಸ್ತಾನ ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ರವಾನಿಸುತ್ತಿದ್ದು, ಪ್ರಕರಣವನ್ನು ಇದೀಗ ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಶನಿವಾರ ತಿಳಿದುಬಂದಿದೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಪಡಿಸಿದ ಬಳಿಕ ಪಾಕಿಸ್ತಾನ ಪದೇ ಪದೇ ಕಿತಾಪತಿ ತೆಗೆಯುತ್ತಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಹೊಂಚು ಹಾಕುತ್ತಿದೆ. ಇದರಂತೆ ಪಂಜಾಬ್ ರಾಜ್ಯಕ್ಕೆ ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ರವಾನಿಸುತ್ತಿದ್ದು, ಇದು ಭಾರತದ ಕೆಂಗಣ್ಣಿಗೆ ಕಾರಣವಾಗಿದೆ. 
  
ಇದರಂತೆ ಪ್ರಕರಣವನ್ನು ಎನ್ಐಎ ವಶಕ್ಕೆ ನೀಡಲು ಕೇಂದ್ರ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಉಗ್ರ ನಿಗ್ರಹ ದಳ ಪ್ರಕರಣವನ್ನು ದಾಖಲಿಸಿಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. 
 
ಪಾಕಿಸ್ತಾನ ಮತ್ತು ಜರ್ಮನಿ ಬೆಂಬಲಿತ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಎಫ್) ಉಗ್ರರ ಅಡಗುತಾಣಗಳ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿದ ಬಳಿಕ ಪಂಬಾಜ್ ರಾಜ್ಯದಲ್ಲಿ ಪಾಕಿಸ್ತಾನ ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ರವಾನೆ ಮಾಡುತ್ತಿದೆ. ಪಂಜಾಬ್ ರಾಜ್ಯದ ಮೇಲೆ ದಾಳಿ ನಡೆಸಲು ಉಗ್ರರು ಭಾರೀ ಸಂಚು ರೂಪಿಸುತ್ತಿದ್ದಾರೆ. ಪ್ರಕಱಣ ಸಂಬಂಧ ನಾಲ್ವರು ಶಂಕಿತರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿತ್ತು.  
 
ಪಂಜಾಬ್ ರಾಜ್ಯ ಸರ್ಕಾರದ ಮನವಿ ಮೇರೆಗೆ ಇದೀಗ ಕೇಂದ್ರ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ವಶಕ್ಕೆ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

SCROLL FOR NEXT